ಭಾನುವಾರ, ಜುಲೈ 25, 2010

ಕಾಂಡೋಮ್ ಕೊಳ್ಳಲು ಕಾಮಲಾಂಜ್

ಔಷಧಾಲಯದ ಗಾಜಿನ ಪೆಟ್ಟಿಗೆಯೊಳಗೆ ಮೂಲೆಯಲ್ಲಿ ಪಾಕೀಟಿನಲ್ಲಿ ಕೂತ ಕಾಂಡೋಮ್ ಗಳನ್ನು ಧೈರ್ಯವಾಗಿ ಕೇಳಿ ಪಡೆಯಲು ಹೆಚ್ಚಿನ ಯುವಕರು ಹಿಂಜರಿಯುತ್ತಾರೆ. ಅಕ್ಕಪಕ್ಕದಲ್ಲಿ ಯಾರೂ ಇಲ್ಲದಿದ್ದರೂ ಕಾಂಡೋಮ್ ಬೇಕು ಎಂದು ಕೇಳುವಲ್ಲಿ ಬೆವರು ಬಿಟ್ಟಿರುತ್ತಾರೆ. ಈಗ ಅಂಗಡಿಗೆ ಹೋಗಿ ಕಾಂಡೋಮ್ ಅನ್ನು ಕೊಳ್ಳುವ ಪ್ರಮೇಯವೇ ಇಲ್ಲ. ಕುಳಿತಲ್ಲಿಂದಲೇ ಕಂಪ್ಯೂಟರ್ ಬಟನ್ ಒತ್ತಿ ಯಾವ ಹಿಂಜರಿಕೆಯೂ ಇಲ್ಲದೆ ಕಾಂಡೋಮ್ ಕೊಳ್ಳಬಹುದು.

ಭಾರತದಲ್ಲಿ ಇಂಟರ್ನೆಟ್ [^] ಬಳಕೆ ಜಾಸ್ತಿಯಾಗಿರುವುದನ್ನು ಮನಗಂಡಿರುವ ಕಾಮಸೂತ್ರ [^] ಕಾಂಡೋಮ್ ಯುವಕರನ್ನು ಆಕರ್ಷಿಸಲೆಂದೇ ಕಾಮಲಾಂಜ್ ಎಂಬ ಇಂಟರ್ನೆಟ್ ತಾಣವನ್ನು ಹುಟ್ಟುಹಾಕಿದೆ. ಇಲ್ಲಿ ಯಾವುದೇ ಹಿಂಜರಿಕೆ, ಮುಜುಗರವಿಲ್ಲದೆ ಮುಕ್ತವಾಗಿ ಕಾಮಸೂತ್ರ ಕಾಂಡೋಮ್ ಮನೆಗೇ ತರಿಸಿಕೊಳ್ಳಬಹುದು.

ಕಾಂಡೋಮ್ ಕೊಳ್ಳುವ ವಿಷಯದಲ್ಲಿ ಮಡಿವಂತಿಕೆಯೇ ಮೆರೆದಾಡುತ್ತಿರುವ ಈ ಹಂತದಲ್ಲಿ ಕಾಂಡೋಮ್ ಬ್ರಾಂಡ್ ಕಾಮಲಾಂಜ್ ತೆರೆದಿರುವುದು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೋಲ್ಡ್ ನಡೆ ಎಂದೇ ಬಣ್ಣಿಸಲಾಗಿದೆ. ಇಲ್ಲಿ ಏನಿದೆ ಏನಿಲ್ಲ? ಲೈಂಗಿಕ ಕ್ರಿಯೆ ನಡೆಸುವಾಗ ಯಾವ ರೀತಿ ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂಬುದರಿಂದ ಹಿಡಿದು, ವಿಡಿಯೋ, ಬಾರ್ ಡ್ಯಾನ್ಸ್ ಬಗ್ಗೆ ಮಾಹಿತಿ ಇದೆ. ಇಲ್ಲಿ ಕಾಮದ ಬಗ್ಗೆ ಬಿಂದಾಸ್ ಆಗಿ ಮಾತಾಡಬಹುದು, ತಮ್ಮ ಅನಿಸಿಕೆಗಳನ್ನು ಇತರ ನೆಟ್ಟಿಗರೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು.

ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆಗಳಲ್ಲಿ ನಿರತರಾಗುತ್ತಿರುವುದು ಏಡ್ಸ್ ನಂಥ ಮಾರಕ ರೋಗಕ್ಕೆ ಇಂದಿನ ಯುವಜನತೆ ತುತ್ತಾಗುತ್ತಿದೆ. ಏಡ್ಸ್ ಬಗ್ಗೆ ತಿಳಿವಳಿಕೆ ಇದ್ದರೂ ಕಾಂಡೋಮ್ ಕೊಳ್ಳುವಲ್ಲಿ ಅನುಭವಿಸುತ್ತಿರುವ ಮುಜುಗರ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ಅಂಥವರು ಮುಜುಗರದ ಗೂಡಿನಿಂದ ಆಚೆಬರಲಿ ಲೈಂಗಿಕತೆಯ ಬಗ್ಗೆ ಮನಸು ತೆರೆದುಕೊಂಡಿರಲಿ ಎಂಬುದು ಕಾಮಲಾಂಜ್ ಹುಟ್ಟಿಸಿದವರ ಆಶಯ.

ಈ ವರ್ಚುವಲ್ ಜಗತ್ತಿನಲ್ಲಿ ಸೆಕ್ಸ್ ಮತ್ತು ಕಾಂಡೋಮ್ ಬಿಟ್ಟು ಮತ್ತೇನೂ ಇಲ್ಲ. ಯುವ ಮನಸುಗಳನ್ನು ಹಿಡಿದಿಡಲು ಇನ್ನೇನು ಬೇಕು?

ಕನ್ನಡಕ್ಕೆ OCR ಬೇಕೇ?

esseract ಎನ್ನುವ ತತ್ರಾಂಶ ಮೂಲತ: ಮುಕ್ತ. ಇದು OCRಗೋಸ್ಕರ ತಯಾರಿಸಲಾಗಿದೆ. ಎಲ್ಲಾ ಭಾಷೆಗಳಿಗೂ ಅಳವಡಿಸಿಕೊಳ್ಳಲು ಸಾಧ್ಯವಿದೆ. ತೆಲುಗಿನಲ್ಲಿ ಈ ಕೆಲಸ ನಡೆಯುತ್ತಿದೆಯೆಂದು ಕೇಳಿದ್ದೇನೆ. ಆ  ತತ್ರಾಂಶವನ್ನು ಕೊಂಚ ತರಬೇತಿಕೊಟ್ಟು ಕನ್ನಡದ ಅಚ್ಚಿನ ಪುಟಗಳನ್ನೂ OCR ಉಪಯೋಗಿಸಿ ಚಿತ್ರವನ್ನು ಪಠ್ಯವಾಗಿ ಬದಲಾಯಿಸಿಕೊಂಡು ಪರಿಷ್ಕರಿಸಬಹುದು ಮತ್ತು ಪಠ್ಯವು ಕಡಿಮೆ ಸ್ಮೃತಿಕೋಶದಲ್ಲಿ ಕಡಿಮೆ ಜಾಗವನ್ನು ಉಪಯೋಗಿಸುವುದರಿಂದ ಬಹಳ ಅನುಕೂಲಗಳು ಇವೆ. ಕರ್ನಾಟಕದಲ್ಲಿ ಗಣಕ ತತ್ರಾಂಶ ಪರಿಣತರು ಕಡಿಮೆ ಏನಿಲ್ಲ. ಈ ಕೆಲಸಕ್ಕೆ ಏಕೆ ಮುಂದೆಬರಬಾರದು ಎಂದು ನನ್ನ ವಿನಂತಿ. ಸ್ವಯಂ ಸೇವಕರು ಒಂದು ಗುಂಪುಮಾಡಿಕೊಂಡು ಕನ್ನಡಕ್ಕೆ ಉಪಯೋಗವಾಗುವ ಕೆಲಸ ಮಾಡಬಾರದೇಕೆ?
ಇಷ್ಟವಿದ್ದವರು http://code.google.c... ಈ ಪುಟವನ್ನು ನೋಡಿ. 
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:  

ಬೆರಳ ತುದಿಯಲ್ಲಿ ಹೊಸ ಪ್ಲೇಬಾಯ್ ಲಭ್ಯ!

ಮೆರಿಕದ ಜನಪ್ರಿಯ ನಿಯತಕಾಲಿಕೆ ಪ್ಲೇಬಾಯ್ ಇನ್ನು ಮುಂದೆ ಅಂತರ್ಜಾಲ [^]ದಲ್ಲಿ ಹೊಸದಾಗಿ ದರ್ಶನ ನೀಡಲಿದೆ. ಇನ್ನು ಮುಂದೆ ಪ್ಲೇಬಾಯ್ ಪತ್ರಿಕೆಯನ್ನ್ನು ಅಂತರ್ಜಾಲದಲ್ಲಿ ಕದ್ದು ಮುಚ್ಚಿ ಓದುವ ಅಗತ್ಯವಿಲ್ಲ. ತನ್ನ ಹೊಸ ಅಂತರ್ಜಾಲ ತಾಣವನ್ನು ಯಾವುದೇ ಅಶ್ಲೀಲ ಚಿತ್ರಗಳಿಲ್ಲದಂತೆ ಪ್ಲೇಬಾಯ್ ರೂಪಿಸಿದೆ. ಒಮ್ಮೆ ಕ್ಲಿಕ್ಕಿಸಿ ನೋಡಿ.

ಇಂಟರ್ನೆಟ್ ಸಂಪರ್ಕ ಇರುವವರು ಕಚೇರಿಯಲ್ಲೇ ಕುಳಿತು ಇನ್ನು ಮುಂದೆ ಯಾವುದೇ ಬಿಗುಮಾನವಿಲ್ಲದೆ ಪ್ಲೇಬಾಯ್ ಓದಬಹುದು. ಹೊಸ ಅಂತರ್ಜಾಲ ತಾಣದಲ್ಲಿ ಜೋಕ್ ಗಳು, ವಿಡಿಯೋ [^]ಗಳೊಂದಿಗೆ ಮನರಂಜನೆಗೆ ಒತ್ತು ಕೊಡಲಾಗಿದೆ. ಒಟ್ಟಿನಲ್ಲಿ ಯುವ ಸಮುದಾಯವನ್ನು ಆಕರ್ಷಿಸಲು ಈ ಅಂತರ್ಜಾಲ ತಾಣವನ್ನು ರೂಪಿಸಲಾಗಿದೆ ಎನ್ನುತ್ತದೆ ಪ್ಲೇಬಾಯ್.

ತನ್ನ ಬಹುಸಂಖ್ಯಾತ ಓದುಗರಾದ 25 ರಿಂದ 34ರ ವಯೋಮಾನದವರಿಗಾಗಿ ಈ ವೆಬ್ ಸೈಟನ್ನು ರೂಪಿಸಲಾಗಿದ್ದು ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಲೈಂಗಿಕ ಸುದ್ದಿಗಳು, ಲೇಖನಗಳು, ಹಾಟ್ ವಿಡಿಯೋಗಳು, ಜೀವನ ಶೈಲಿ, ಕಾಮಿಡಿ ವಿಡಿಯೋಗಳು, ಗಾಸಿಪ್ ಸುದ್ದಿಗಳು...ಹೀಗೆ ವೈವಿಧ್ಯಮಯ ಮನರಂಜನೆ ಹೊಸ ಅಂತರ್ಜಾಲ ತಾಣದಲ್ಲಿ ಲಭ್ಯವಾಗಲಿದೆ.

ನಮ್ಮ ಬಹಳಷ್ಟು ಓದುಗರು ಕಚೇರಿಯಲ್ಲಿ ಹಳೆ ಪ್ಲೇಬಾಯ್ ವೆಬ್ ಸೈಟನ್ನು ನೋಡಲು ಸಾಧ್ಯವಾಗುತ್ತಿರುವಲಿಲ್ಲ. ಪ್ಲೇಬಾಯ್ ಗೆ ಭೇಟಿ ಕೊಡುವ ಸುವರ್ಣಾವಕಾಶದಿಂದ ನಮ್ಮ ಓದುಗರು ವಂಚಿತರಾಗುತ್ತಿದ್ದರು. ಹಾಗಾಗಿ ಈ ಹೊಸ ವೆಬ್ ಸೈಟನ್ನು ಆರಂಭಿಸಿದ್ದೇವೆ ಎನ್ನುತ್ತಾರೆ ಪ್ಲೇಬಾಯ್ ಪತ್ರಿಕೆಯ ಜಿಮ್ಮಿ ಜೆಲ್ಲಿನೆಕ್.

ಈ ಹೊಸ ಅಂತರ್ಜಾಲ ತಾಣದಲ್ಲಿ ಪ್ಲೇಬಾಯ್ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಕ್ಲಿಕ್ಕಿಸಬಹುದು. ಈಜುಡುಗೆ ಸುಂದರಿಯರು, ತಮಾಷೆಯ ಛಾಯಾಚಿತ್ರಗಳನ್ನು ನೋಡಬಹುದು. ದೂರದರ್ಶನದ ಜನಪ್ರಿಯ ಕಾರ್ಯಕ್ರಮಗಳು, ಜನಪ್ರಿಯ ವೆಬ್ ಸೈಟ್ ಗಳ ಕೊಂಡಿಗಳು, ವಿಡಿಯೋಗಳನ್ನು ಸವಿಯಬಹುದು.

ಗುರುವಾರ, ಜುಲೈ 22, 2010

ಮೆಟ್ರೊ ರೈಲು – ಕನ್ನಡವಿಲ್ಲದೇ ಫೇಲು !

ಗೆಳೆಯರೇ,

ಬೆಂಗಳೂರಿನ ಹಲವಾರು ಪ್ರಮುಖ ರಸ್ತೆಗಳಲ್ಲಿ ಮೆಟ್ರೋ ರೈಲು ಕಾಮಗಾರಿ ನಡೀತಿದೆ. ಎಲ್ಲ ಕಡೆ “ನಮ್ಮ ಮೆಟ್ರೋ” ಅಂತ ನಾಮ ಫಲಕಗಳನ್ನು ನೋಡಿ ಹೆಮ್ಮೆ ಪಡುತ್ತಿದ್ದೆ. ಆದರೆ ಮೊನ್ನೆ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ನಮ್ ಬೆಂಗಳೂರಿಗೆ ಬರಲಿರುವ ಮೆಟ್ರೋ ಭೋಗಿಯ ನಮೂನೆಯನ್ನು ವೀಕ್ಷಣೆಗೆ ಇಟ್ಟಿದ್ದರು. ಅದನ್ನ ಕಂಡು ನನಗೆ ಅಚ್ಚರಿಯಾಯಿತು. ಅದರ ಒಳಗಿರುವ ನಾಮಫಲಕಗಳು, ಸೂಚನೆ ಫಲಕಗಳು ಎಲ್ಲವೂ ಸಂಪೂರ್ಣ ಹಿಂದಿ ಹಾಗು ಇಂಗ್ಲಿಷ್ ಮಯ !! ಒಂದು ಕ್ಷಣ ಇದೇನು ದೆಹಲಿ ಮೆಟ್ರೋದ ಬೋಗಿಯೊಂದನ್ನು ಕದ್ದು ತಂದು ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರಾ ಅನ್ನೋ ಹಾಗಾಯ್ತು ! ಯಾಕೆಂದ್ರೆ ದೆಹಲಿಯಲ್ಲಿರೋ ಹಾಗೇ ಹಿಂದಿ, ಇಂಗ್ಲಿಷ್ ಅಲ್ಲಿ ಎಲ್ಲ ಸೂಚನೆಗಳು, ಬೋರ್ಡ್ ಗಳು ಇದ್ದವು. ದೆಹಲಿಯಲ್ಲೆನೋ ಹಿಂದಿ ಹಾಕೋದು ಸರಿಯಾದ ನಡೆ, ಆದ್ರೆ ಅಲ್ಲಿಂದ 2000 ಕಿ.ಮೀ ದೂರ ಇರೋ ಕನ್ನಡಿಗರ ಊರಾದ ಬೆಂಗಳೂರಲ್ಲಿ ಕನ್ನಡ ಬಿಟ್ಟು ಹಿಂದಿ ಹಾಕಿರೋದ್ಯಾಕೆ? ಯಾವುದೇ ಊರಿನಲ್ಲದರೂ ಸರಿ, ಸಾರ್ವಜನಿಕ ಸಂಚಾರ ವ್ಯವಸ್ಥೆ ಅಲ್ಲಿನ ಸ್ಥಳೀಯ ಬಹುಸಂಖ್ಯಾತರಿಗೆ ಬಳಸಲು ಅನುಕೂಲವಾಗುವಂತೆ ಆಯಾ ನಾಡಿನ ಸ್ಥಳೀಯ ಭಾಷೆಯಲ್ಲಿರಬೇಕು. ಬಿ.ಎಂ.ಟಿ.ಸಿ, ಟ್ಯಾಕ್ಸಿ ಗಳು, ಆಟೋಗಳು ಅಚ್ಚುಕಟ್ಟಾಗಿ ಕನ್ನಡ ಬಳಸ್ತಾ ಇರೋದನ್ನ ನೋಡಾದ್ರೂ ಇವರು ಕಲಿಬಾರದಾ?
ಯಾರ ಅನುಕೂಲಕ್ಕಾಗಿ ಈ ಸಂಚಾರಿ ವ್ಯವಸ್ತೆಯನ್ನು ನಿರ್ಮಿಸುತ್ತಿದ್ದಾರೋ, ಆ ಜನರ ಭಾಷೆಯಲ್ಲೇ ಸೂಚನೆಗಳು, ನಾಮಫಲಕಗಳು ಇರದಿದ್ದರೆ, ಕೋಟ್ಯಾಂತರ ರೂಪಾಯಿಗಳು ಖರ್ಚು ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಲ್ವಾ? ಅದು ಅಲ್ಲದೇ, ಇದರಲ್ಲಿ ನಮ್ ರಾಜ್ಯ ಸರ್ಕಾರದ ದುಡ್ಡು ಸಾಕಷ್ಟು ಖರ್ಚು ಮಾಡಿದ್ದಾರೆ, ಹಾಗಿದ್ದ ಮೇಲೆ ರಾಜ್ಯ ಸರ್ಕಾರದ ಕಾನೂನಿನಂತೆ ಇಲ್ಲೆಲ್ಲ ಕನ್ನಡ ಬಳಕೆ ಸರಿಯಾಗಿ ಆಗಬೇಕಲ್ವ?
ಬರೋ ಡಿಸೆಂಬರ್ ಹೊತ್ತಿಗೆ ಮೆಟ್ರೊ ರೈಲು ಬೆಂಗಳೂರಿನಲ್ಲಿ ಚುಕುಬುಕು ಶುರು ಮಾಡಲಿದೆ. ಬಿ.ಎಂ.ಆರ್.ಸಿ.ಎಲ್ ಗೆ ಈಗಲೇ ಮಿಂಚೆ ಬರೆದು ಕನ್ನಡದಲ್ಲಿ ಎಲ್ಲ ರೀತಿಯ ಸೂಚನೆ, ಫಲಕ ಹಾಕಲು ಒತ್ತಾಯಿಸೋಣ. ನೆನಪಿರಲಿ, ಇದನ್ನ ಈಗಲೇ ಮಾಡದಿದ್ದರೆ, ನಮ್ಮ ಭಾಷೆಗೆ ಅರ್ಹವಾಗಿ ಅಲ್ಲಿ ಸಿಗಬೇಕಾದ ಸ್ಥಾನ ಎಂದಿಗೂ ಸಿಗದು !
ಅವರಿಗೆ ಮಿಂಚೆ ಬರೆಯಬೇಕಾದ ವಿಳಾಸ – bmrcl@dataone.in , vasanthrao@bmrc.co.in , sivasailam@bmrc.co.in , sudhirchandra@bmrc.co.in
ಹೆಚ್ಚಿನ ವಿವರಗಳು ಈ ಕೊಂಡಿಯಲ್ಲಿದೆ – http://www.bmrc.co.in/contact.html
Filed under: ಅಂಕಣಗಳು

‘ಬ್ಲ್ಯಾಕ್ ಬಾಕ್ಸ್’ ಜನಕ ಡೇವಿಡ್ ವಾರೆನ್ ಇನ್ನಿಲ್ಲ

ವಿಮಾನ ಅಪಘಾತಗಳ ಕಾರಣಗಳ ಬಗ್ಗೆ ನಿಖರ ಮಾಹಿತಿ ಒದಗಿಸುವ ‘ಬ್ಲ್ಯಾಕ್ ಬಾಕ್ಸ್’ ಉಪಕರವನ್ನು ಸಂಶೋಧನೆ ಮಾಡಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರೆನ್ (85) ಕೊನೆಯುಸಿರೆಳಿದಿದ್ದಾರೆ.
ವಿಮಾನ ಅಪಘಾತಗಳು ಹೇಗೆ ನಡೆಯಿತು ಎಂದು ಬ್ಲ್ಯಾಕ್ ಬಾಕ್ಸ್ ಅಥವಾ ಕಪ್ಪು ಪೆಟ್ಟಿಗೆ ಮಹತ್ವದ ಮಾಹಿತಿ ಒದಗಿಸುತ್ತವೆ. ಆ ಮೂಲಕ ವಿಮಾನ ದುರಂತದ ನಿಖರ ಕಾರಣಗಳು ಪತ್ತೆಯಾಗುತ್ತವೆ.
1953ರಲ್ಲಿ ವಿಶ್ವದ ಮೊತ್ತ ಮೊದಲ ವಾಣಿಜ್ಯ ಉದ್ದೇಶಿತ ಜೆಟ್ ‘ಕಾಮೆಟ್’ ವಿಮಾನ ಅಪಘಾತಕ್ಕೀಡಾದ ಸಂದರ್ಭದಲ್ಲಿ ವಾರೆನ್‌ ಮನದಲ್ಲಿ ಬ್ಲ್ಯಾಕ್ ಬಾಕ್ಸ್ ಸಂಶೋಧನೆ ಬಗ್ಗೆ ಯೋಚನೆ ಹೊಳೆಯಿತು. ತನಿಖೆಯ ಹಂತದಲ್ಲಿ ಇದರ ಧ್ವನಿ ಮತ್ತು ಇತರ ಮಹತ್ವದ ಅಂಶಗಳ ದಾಖಲಾತಿ ಇದ್ದರೆ ನಿಖರ ತನಿಖೆ ನಡೆಸಲು ಸಾಧ್ಯ ಎಂಬುದನ್ನು ಮನಗಂಡ ಅವರು ಉಪಕರಣವೊಂದರ ಅಭಿವೃದ್ಧಿಗೆ ಮುಂದಾದರು.
ಆರಂಭದಲ್ಲಿ ಅವರ ಯೋಜನೆಗಳಿಗೆ ಹಲವು ತೊಡಕುಗಳು ಎದುರಾದರೂ ಹಿಂದೆಸರಿಯದ ಡೇವಿಡ್ 1956ರಲ್ಲಿ ಪ್ರಯೋಗಾರ್ಥ ಕಪ್ಪು ಪೆಟ್ಟಿಗೆಯನ್ನು ರಚಿಸಿದರು. ನಂತರ ಇದನ್ನು ಆಸ್ಟ್ರೇಲಿಯಾ ಸರಕಾರ ಕಡ್ಡಾಯಗೊಳಿಸಿತು.
ವಿಶ್ವ ವಿಮಾನಯಾನದ ಸುರಕ್ಷತೆಗೆ ಡೇವಿಡ್ ವಾರೆನ್ ಸಂಶೋಧನೆ ವಿಶ್ವಕ್ಕೆ ನೀಡಿದ ಪ್ರಮುಖ ಕೊಡುಗೆಯಾಗಿದೆ ಎಂದು ಆಸ್ಟ್ರೇಲಿಯಾ ರಕ್ಷಣಾ ಇಲಾಖೆ ತಿಳಿಸಿದೆ.

ಏನಿದು ಬ್ಲ್ಯಾಕ್ ಬಾಕ್ಸ್…
ಬ್ಲ್ಯಾಕ್ ಬಾಕ್ಸ್ (ಕಪ್ಪು ಪೆಟ್ಟಿಗೆ) ಉಪಕರಣದಲ್ಲಿ ಎರಡು ಪ್ರಮುಖ ಭಾಗಗಳಿವೆ. ಒಂದು ‘ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್’. ಇನ್ನೊಂದು ‘ಫ್ಲೈಟ್ ಡಾಟಾ ರೆಕಾರ್ಡರ್’. ಇದರ ಪೈಕಿ ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಎಂಬ ಉಪಕರಣ ಡಿಜಿಟಲ್ ಆಗಿ ಕಾಕ್‌ಪಿಟ್‌ನೊಳಗೆ ನಡೆಸಿದ ಎಲ್ಲ ಸಂಭಾಷಣೆಗಳನ್ನೂ ದಾಖಲಿಸುತ್ತದೆ. ಅವಘಢಗಳ ಸಂದರ್ಭ ಹಾಗೂ ಮೊದಲು ಪೈಲಟ್‌ಗಳ ಧ್ವನಿ ರೆಕಾರ್ಡ್ ಆಗಿರುತ್ತದೆ. ಹಾಗಾಗಿ ಇದು ಯಾವುದೇ ವಿಮಾನ ದುರಂತವಾದರೂ, ಅದು ಹೇಗಾಯಿತೆಂದು ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಉಪಕರಣವಾಗಿ ಮಹತ್ವ ಪಡೆದಿದೆ.
ಆದರೆ ಈ ಬ್ಲ್ಯಾಕ್ ಬಾಕ್ಸಿನ ಮತ್ತೊಂದು ಭಾಗವಾದ ಫ್ಲೈಟ್ ಡಾಟಾ ರೆಕಾರ್ಡರ್ ಕೂಡಾ ಮಹತ್ವವಾಗಿದ್ದು, ಇದು ವಿಮಾನದ ವೇಗೋತ್ಕರ್ಷ, ಎಂಜಿನ್, ಗಾಳಿಯ ವೇಗ, ವಿಮಾನವಿದ್ದ ಎತ್ತರ, ರಾಡಾರ್ ಇರುವ ಸ್ಥಳ ಸೇರಿದಂತೆ ಹಲವು ಮಾಹಿತಿಗಳನ್ನು ನೀಡುತ್ತದೆ. ಇವೆಲ್ಲ ಮಾಹಿತಿಗಳ ಮೂಲಕ ವಿಮಾನ ದುರಂತಕ್ಕೆ ಕಾರಣವನ್ನು ತಜ್ಞರು ಪತ್ತೆ ಮಾಡುತ್ತಾರೆ.
ಈ ಕಪ್ಪು ಪೆಟ್ಟಿಗೆ ಶೂ ಬಾಕ್ಸ್‌ನಷ್ಟು ದೊಡ್ಡದಿದ್ದು, ಇದರ ಹೊರಕವಚ ಪ್ರತಿಫಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊರಕವಚ ಸ್ಟೀಲ್‌‌ನಿಂದ ಆವೃತವಾಗಿದೆ. ಈ ಪೆಟ್ಟಿಗೆ ಯಾವುದೇ ಉಷ್ಣತೆಯನ್ನೂ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ನೀರಿನಲ್ಲಿ ಮುಳುಗಿದರೂ ತನ್ನೊಳಗೆ ಹೊಂದಿರುವ ಯಾವುದೇ ಮಾಹಿತಿಗಳನ್ನು ಕಳೆದುಕೊಳ್ಳುವುದಿಲ್ಲ ಹಾಗೂ ನಾಶವಾಗುವುದಿಲ್ಲ. ಯಾವುದೇ ವಿಮಾನ ದುರಂತದ ಸಂದರ್ಭದಲ್ಲಿಯೂ ಅತೀ ಕಡಿಮೆ ಹಾನಿಯಾಗುವ ಪ್ರದೇಶ ಎಂದರೆ ವಿಮಾನದ ಬಾಲವಾಗಿದೆ. ಆದ್ದರಿಂದ ಈ ಉಪಕರಣವನ್ನು ಬಾಲದ ಸಮೀಪ ಅತ್ಯಂತ ಭದ್ರವಾಗಿ ಆಳವಡಿಸಲಾಗುತ್ತದೆ.
ವಿಮಾನ ಅಪಘಾತ ಸಂಭವಿಸಿದ ನಂತರ ಕಪ್ಪು ಪೆಟ್ಟಿಗೆ ಸಿಕ್ಕರೆ ವಿಮಾನ ಅಪಘಾತಕ್ಕೆ ಕಾರಣಗಳನ್ನು ಪತ್ತೆಹಚ್ಚಬಹುದು. ಭಾರತದಲ್ಲಿ ಎಲ್ಲಿಯೇ ವಿಮಾನ ಅಪಘಾತ ಸಂಭವಿಸಿದರೂ, ಮೊದಲು ಕಪ್ಪುಪೆಟ್ಟಿಗೆಯನ್ನು ಪಡೆದ ಮೇಲೆ ಅದನ್ನು ಸಿವಿಲ್ ಏವಿಯೇಷನ್‌ನ ಪ್ರಮುಖ ಕಚೇರಿಯಿರುವ ದೆಹಲಿಗೆ ರವಾನಿಸಲಾಗುತ್ತದೆ. ಅಲ್ಲಿಯೂ ಯಾವುದಾದರೂ ಕಾರಣದಿಂದ ಮಾಹಿತಿ ಪಡೆಯಲು ಸಾಧ್ಯವಾಗದೆ ಇದ್ದರೆ, ಕಪ್ಪುಪೆಟ್ಟಿಗೆಯನ್ನು ವಿಮಾನ ತಯಾರಾದ ಸಂಸ್ಥೆಗೆ ರವಾನಿಸಿ ಅಲ್ಲಿಂದ ಮಾಹಿತಿ ಪಡೆದುಕೊಳ್ಳುವ ಕೆಲಸವನ್ನೂ ಮಾಡಲಾಗುತ್ತದೆ.

ಮನೋಚೇತನ ಮಾನಸಿಕ ಆರೋಗ್ಯ ಜಾಗೃತಿಯ ತಾಣ

 ಕನ್ನಡಿಗರಲ್ಲಿ ಮಾನಸಿಕ ಆರೋಗ್ಯ ಜಾಗೃತಿಯ ಅರಿವು ಮೂಡಿಸುವುದರ ಜೊತೆಗೆ ಮಾನವನನ್ನು ಕಾಡುತ್ತಿರುವ ಮಾನಸಿಕ ಸಮಸ್ಯೆಗಳ ಪರಿಹಾರಕ್ಕಾಗಿ ತಜ್ಞ ವೈದ್ಯರುಗಳ ಸಲಹೆ , ಸಹಕಾರ ಪಡೆಯಲು ನೆರವಾಗಬೇಕೆಂಬ ಸಾಮಾಜಿಕ ಉದ್ದೇಶದಿಂದ ಈ ತಾಣವನ್ನು ರಚಿಸಲಾಗಿದೆ.
ಖ್ಯಾತ ಮನೋರೋಗ ತಜ್ಞ ಡಾ: ಸಿ.ಆರ್. ಚಂದ್ರಶೇಖರ್ ರವರ ಉಚಿತ ಸೇವೆ.

ಹೊಚ್ಚ ಹೊಸ ಬ್ರೌಸರ್ ಎಪಿಕ್ ಪೂರ್ವಾಪರ

ವಿಂಡೋಸ್ ಎಕ್ಸ್ ಪ್ಲೋರರ್ 6 ಅವಸಾನದ ಬೆನ್ನಲ್ಲೇ ಗೂಗಲ್ ಕ್ರೋಮ್ ಮಾರುಕಟ್ಟೆ ಪ್ರವೇಶಿಸಿದರೂ ಹೆಚ್ಚಿಗೆ ಸುದ್ದಿ ಮಾಡಲಿಲ್ಲ. ಆದರೆ ಇದರೆಲ್ಲದರ ಲಾಭ ಪಡೆದಿದ್ದು ಮಾತ್ರ ಮೊಝಿಲ್ಲಾ. ಭಾರತೀಯ ಜನಮನ ಗೆಲ್ಲಲು ಮೊಝಿಲ್ಲಾ ತನ್ನ ಬತ್ತಳಿಕೆಯಿಂದ ಬ್ರಹ್ಮಾಸ್ತ್ರದಂಥ ಬ್ರೌಸರ್ ಪ್ರಯೋಗಿಸಿದ್ದು, ಯುವಜನರ ಮನ ಗೆಲ್ಲುವಲ್ಲಿ ಸಫಲವಾಗುವ ಎಲ್ಲಾ ಸಾಧ್ಯತೆಗಳಿವೆ.
ಸುಮಾರು 1500ಕ್ಕೂ ಥೀಮ್ ಗಳೊಂದಿಗೆ ಶ್ರೀಮಂತಿಕೆಯೇ ಮೈವೆತ್ತಿದ್ದಂತಿರುವ ಎಪಿಕ್ ಮೊದಲ ನೋಟಕ್ಕೆ ಎಲ್ಲರನ್ನು ಮೋಡಿ ಮಾಡದೆ ಬಿಡದು.
ಆಂಟಿ ವೈರಸ್ ವುಳ್ಳ ಪ್ರಪ್ರಥಮ ಬ್ರೌಸರ್, ಖಾಸಗಿ ಬ್ರೌಸಿಂಗ್, ಸುರಕ್ಷತೆಯಲ್ಲಿ ಉತ್ಕೃಷ್ಟ ಸೇವೆ, ಪ್ರಥಮ ಬಾರಿಗೆ ಸೈಡ್ ಬಾರ್ ನಲ್ಲಿ ಆಪ್ಸ್ ಇರುವ ಬ್ರೌಸರ್ ಎಂದೆಲ್ಲ ಗುಣವಿಶೇಷಗಳೊಂದಿಗೆ ಜಾಲಿಗರ ಮುಂದೆ ನಿಲ್ಲುವ ಎಪಿಕ್ ತನ್ನ ಘೋಷಣೆಗೆ ತಕ್ಕಂತೆ ಇದೆ.
ಮೊಟ್ಟ ಮೊದಲ ಅನುಭವ ಕಥನ ಹಾಗೂ ಅನಿಸಿಕೆ ಹೀಗಿದೆ.
* ಮೊದಲಿಗೆ ವಿಡಿಯೋವುಳ್ಳ ಅಥವಾ ಫ್ಲಾಶ್ ಬಳಕೆ ಮಾಡಿರುವ ವೆಬ್ ಸೈಟ್ ತೆರೆಯಲು ಪ್ರಯತ್ನಿಸಿದೆ. ವೆಬ್ ತಾಣದಲ್ಲಿ ಫ್ಲಾಶ್ ಅಥವಾ ವಿಡಿಯೋ ಇರುವುದು ಕಂಡು ಬಂದ ತಕ್ಷಣ, ವಿಡಿಯೋವನ್ನು ಪ್ರತ್ಯೇಕವಾಗಿ ಸೈಡ್ ಬಾರ್ ನಲ್ಲಿ ವೀಕ್ಷಿಸಲು ಅಥವಾ ಪ್ಲೇ ಲಿಸ್ಟ್ ಗೆ ಸೇರಿಸಲು ಕೇಳುವ ಸಂದೇಶ ಬರುತ್ತದೆ.
* ಎಪಿಕ್ ತೆರೆದ ತಕ್ಷಣ ಕಣ್ ತಣಿಸುವುದು ಅದರ ಥೀಮ್ ಅಥವಾ ವಾಲ್ ಪೇಪರ್ ಆಗಿ ಅಥವಾ ಎರಡನ್ನೂ ಅಳವಡಿಸುವ ಸೌಲಭ್ಯ ಇದೆ.
* ಜನ, ಸಂಸ್ಕೃತಿ, ಧರ್ಮ, ಪ್ರಾದೇಶಿಕತೆ, ಕ್ರೀಡೆ, ಸಿನಿಮಾ, ಕಲೆ, ಸಂಗೀತ, ರಾಜಕೀಯ, ಪ್ರಕೃತಿ ಹೀಗೆ ವಿವಿಧ ರಂಗದ ಹೆಸರಾಂತ ವ್ಯಕ್ತಿ ಸ್ಥಳ ಹಾಗೂ ವಿಶೇಷ ಚಿತ್ರಗಳ ಥೀಮ್ ಗಳು ಅದ್ಭುತವಾಗಿದೆ. ವೀತಮ್ಮ ನೆಚ್ಚಿನ ಥೀಮ್ ರೂಪಿಸಿಕೊಳ್ಳಲು ವೀಕ್ಷಕರಿಗೆ ಅವಕಾಶ ಕೂಡ ಇದೆ.
* ಕನ್ನಡಕ್ಕೂ ತಕ್ಕಮಟ್ಟಿನ ಮಾನ್ಯತೆ ಸಿಕ್ಕಿದ್ದು ಡಾ. ರಾಜ್ ಕುಮಾರ್ , ಡಾ.ವಿಷ್ಣುವರ್ಧನ್ ರಿಂದ ಹಿಡಿದು ರಮ್ಯಾ, ಗಣೇಶ್, ಉಪೇಂದ್ರ ಎಲ್ಲಾ ಥೀಮ್ ನಲ್ಲಿ ಸೇರಿಬಿಟ್ಟಿದ್ದಾರೆ. ಆದ್ರೆ ಉಪೇಂದ್ರರ ಹೆಂಡತಿ ಮಾತ್ರ ಇನ್ನೂ ತಮಿಳು ಥೀಮ್ ನಲ್ಲೇ ಇದ್ದಾರೆ. ಕರ್ನಾಟಕದ ವೈಶಿಷ್ಟ್ಯಗಳು ಎಲ್ಲಾ ರಂಗದ ಥೀಮ್ ಗಳಲ್ಲೂ ಇರುವುದು ವಿಶೇಷ.
* ಆದರೂ ಥೀಮ್ ಗಳಲ್ಲಿ ಕೆಲವು ಎದ್ದು ಕಾಣಬಲ್ಲ ಲೋಪಗಳಿವೆ. ಆಧ್ಯಾತ್ಮ ನಾಯಕರಲ್ಲಿ ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರೆ ನಾಪತ್ತೆ(ಫೈರ್ ಫಾಕ್ಸ್ ಪರ್ಸೋನಾದಲ್ಲಿದ್ದರೂ). ಸಂಗೀತಗಾರರಲ್ಲಿ ಎಸ್ ಪಿ ಬಾಲಸುಬ್ರಮಣ್ಯಂಗೆ ಸ್ಥಾನ ಸಿಗದಿರುವುದು ಅಚ್ಚರಿಯಾದರೂ ಸತ್ಯ.
* ವಿಶ್ವದೆಲ್ಲೆಡೆಯ ಸುದ್ದಿ ನಿಮ್ಮ ಬೆರಳ ತುದಿಯಲ್ಲಿ ಸಿಗುತ್ತದೆ. ವಿಶ್ವ,ರಾಷ್ಟ್ರೀಯ, ಸ್ಥಳೀಯ, ಕ್ರೀಡೆ, ಮನರಂಜನೆ, ಅರೋಗ್ಯದ ಸುದ್ದಿಗಳು ತಕ್ಷಣಕ್ಕೆ ಸಿಗುತ್ತದೆ.
ನೆಚ್ಚಿನ ಸುದ್ದಿವಾಹಿನಿಗಳನ್ನು ಓದಲು ನೀವು ಬುಕ್ ಮಾರ್ಕ್ ಮಾಡಿಕೊಳ್ಳುವ ಬದಲು ರೆಡಿಮೇಡ್ ಬುಕ್ ಮಾರ್ಕ್ ಆಗಿ ಸಿದ್ಧವಾಗಿದೆ ಎಪಿಕ್.
* ಕ್ರಿಕೆಟ್ ಲೈವ್ ಸ್ಕೋರ್ ಹಾಗೂ ಸುದ್ದಿಗೆ ಪ್ರತ್ಯೇಕ ವಿಭಾಗ ರೂಪಿಸಲಾಗಿದೆ.
* ವ್ಯಾಪಾರ ವಹಿವಾಟು, ಷೇರುಪೇಟೆ ಸುದ್ದಿಯನ್ನು ಒಂದೆಡೆ ಸಿಗುವಂತೆ ಮಾಡಿದ ಎಪಿಕ್ ನಿಜಕ್ಕೂ ಅಭಿನಂದನಾರ್ಹ.
* ನಗರವಾರು ಕಾರ್ಯಕ್ರಮಗಳ ಪಟ್ಟಿ ಸಿಗುತ್ತದೆ.
* ಜೋಕ್ಸ್ ಫಾರ್ ದ ಡೇ ಒಳ್ಳೆ ಪ್ರಯೋಗ.
* ಎನ್ ಡಿಟಿವಿ ಲೈವ್ ಟಿವಿಯ ವಿವಿಧ ವಿಡಿಯೋ ಇದೆ.
* ವಿಡಿಯೋ ವಿಭಾಗದಲ್ಲಿ ಕನ್ನಡ(ಟಿವಿ 9 ನ ಹಳೆ ವಿಡಿಯೋಗಳು ಮಾತ್ರ ಇದೆ) ಸೇರಿದಂತೆ ಇತರೆ ಭಾಷೆಯ ಸುದ್ದಿ ಹಾಗೂ ಮನರಂಜನೆ.
* ಎನ್ ಡಿಟಿವಿ ಸುದ್ದಿ ವಿಡಿಯೋದಲ್ಲಿ ಪ್ರಣವ್ ರಾಯ್ ಜೊತೆ ರಮ್ಯ ಸಂದರ್ಶನ ಸಿಗುತ್ತದೆ. ‘ಕನ್ನಡದಲ್ಲಿ ರಿಮೇಕ್ ಜಾಸ್ತಿ’ ಅನ್ನುವ ರಮ್ಯಾ, ಕನ್ನಡದ ಡೈಲಾಗ್ ಹೇಳು ಅಂದ್ರೆ ‘ಅಮೃತಧಾರೆ ಚಿತ್ರದ ಡೈಲಾಗ್ ಅನ್ನು ಇಂಗ್ಲೀಷ್ ನಲ್ಲೇ ಹೇಳಿ’ ಅಚ್ಚರಿ ಮೂಡಿಸುವ ದಿವ್ಯ ಸ್ಪಂದನರ ವಿಡಿಯೋ ನೋಡಬಹುದು.
ಆಂಟಿ ವೈರಸ್ ಒಂದು ಬಿಗ್ ಪ್ಲಸ್ ಎನ್ನಬಹುದಾದರೂ ಆಗಲೇ ಗಣಕದಲ್ಲಿರುವ ಆಂಟಿ ವೈರಸ್ ಗೂ ಇದಕ್ಕೂ ಏನು ವ್ಯತ್ಯಾಸ ಇದು ಹೇಗೆ ವಿಭಿನ್ನ. ಎರಡರ ನಡುವೆ ಪೈಪೋಟಿಯಲ್ಲಿ ಗಣಕದ ಗತಿಯೇನು ಎಂಬ ಚಿಂತೆ ಮೂಡುವುದು ಸಹಜ. ನಿಮ್ಮ ಗಣಕದಲ್ಲಿ ಈಗಾಗಲೇ ಆಂಟಿವೈರಸ್ ಸರಿ ಇದ್ದರೆ ಬ್ರೌಸರ್ ಅಂಟಿ ವೈರಸ್ ಗೆ ಹೆಚ್ಚಿನ ತೊಂದರೆ ಕೊಡದಿರುವುದೇ ಲೇಸು. ಇಲ್ಲದಿದ್ದರೆ ಬ್ರೌಸರ್ ಅಂಟಿ ವೈಸರ್ ಅತ್ಯುತ್ತಮ ಸಾಧನ.
* ಮಿನಿ ಟೆಕ್ಸ್ಟ್ ಎಡಿಟರ್(word processor) ಹಾಗೂ ಇಂಡಿಕ್ ಟ್ರಾನ್ಸ್ ಲಿಟೆರೇಷನ್ ಟೂಲ್ ಗಳು ಬ್ರೌಸರ್ ನಿಂದ ನಿಮ್ಮನ್ನು ಹೊರಕ್ಕೆ ಕಳಿಸದೆ ಹಿಡಿದಿಟ್ಟುಕೊಳ್ಳಲು ಮಾಡಿದ ಸೌಲಭ್ಯ ಎನ್ನಬಹುದು.
* ಎಪಿಕ್ ರೈಟ್ ನಲ್ಲಿ ಯೂನಿಕೋಡ್ ಇಂಡಿಕ್ ಅಥವಾ ಇತರೆ ಶೈಲಿಯಲ್ಲಿ ಬೇಕಾದ್ದು ಬರೆಯಬಹುದು, ANSI ನಲ್ಲಿ ಬರೆಯಬಹುದಾದರೂ ಏನು ಬರೆದಿರಿ ಎಂದು ತಿಳಿಯುವುದಿಲ್ಲ. ಕಾರಣ ಫಾಂಟ್ ಸಫೋರ್ಟ್ ಇಲ್ಲ. ಯೂನಿಕೋಡ್ ಗೂ ಕೂಡ ಸ್ಥಳೀಯ ಐ ಮೀನ್ ಕನ್ನಡ, ತೆಲುಗು, ತಮಿಳು ಇತರೆ ಭಾಷೆಗಳ ಫಾಂಟ್ ಗಳಿಲ್ಲ. ಬಲವಂತವಾಗಿ ಇಂಡಿಕ್ ಗೆ ದೂಡಿದ್ದಂತಿದೆ.
* ವೆಬ್ ಸ್ನಿಪೆಟ್ಸ್ ಸುಲಭವಾಗಿ ಬಳಕೆ ಮಾಡಲು ಅನುಕೂಲ ಕಲ್ಪಿಸಲಾಗಿದೆ.
* ವಿಡಿಯೋ ಪ್ಲೇ ಲೀಸ್ಟ್ ಇದೆ. ಎಕ್ಸ್ ಪ್ಲೋರರ್ , ಕಾರ್ಯಕ್ರಮ ಪಟ್ಟಿ ತಯಾರಿಕೆಗೆ ಅವಕಾಶ, ಟೈಮರ್ ಇತ್ಯಾದಿ ಕೂಡ ಲಭ್ಯ.
* ಸಾಮಾಜಿಕ ಜಾಲತಾಣ ಫೇಸ್ ಬುಕ್, ಆರ್ಕುಟ್ , ಜೀಮೇಲ್, ಯಾಹೂ ಮೇಲ್ ಅಲ್ಲದೆ ಟ್ವಿಟ್ಟರ್ ಕೂಡಾ ಸೈಡ್ ಬಾರ್ ನಲ್ಲಿ ಸ್ಥಾನ ಗಳಿಸಿದೆ.
* ಗೂಗಲ್ ಮ್ಯಾಪ್ಸ್ , ಕೆಲಸ ಹುಡುಕುವವರಿಗೆ ಜಾಲತಾಣಗಳು, ಪ್ರವಾಸಿಗರಿಗೆ ತಾಣ ಸೂಚಿಗಳಿವೆ.
* ಉಳಿದಂತೆ ಫೈರ್ ಫಾಕ್ಸ್ ನಲ್ಲಿದ್ದಂತೆ ಡೌನ್ ಲೋಡ್ , ಹಿಸ್ಟರಿ, ಆಡ್ ಆನ್ಸ್ ಇದೆ.
* ಕೊನೆಯದಾಗಿ ಹಾಗೂ ಮುಖ್ಯವಾಗಿ ಎಪಿಕ್ ನ ವಿಶೇಷ ಅಡ್ ಆನ್ಸ್ ಗಳು ತುಂಬಾ ಸಹಕಾರಿಯಾಗಿ ಹೊರ ಹೊಮ್ಮಿದೆ.
* ಫೈಲ್ ಮ್ಯಾನೇಜರ್ ಸೌಲಭ್ಯದ ಮೂಲಕ ಜೀಮೇಲ್ ಖಾತೆ ಬಳಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಡಬಹುದಾಗಿದೆ.
* ಎಪಿಕ್ ಆಡ್ ಆನ್ ಗಳದ್ದೇ ದೊಡ್ಡ ಕಥೆ ಹೇಳಬಹುದು. ಐಫೋನ್ ಆಡ್ ಅನ್ ಗಳಂತೆ ವಿವಿಧ ಬಗೆಯಲ್ಲಿ ದೊರೆಯುತ್ತದೆಯಾದರೂ ರೇಡಿಯೋ ಸ್ಥಳೀಯವಾಗಿ ಇನ್ನೂ ರೂಪಿತವಾಗಿಲ್ಲ.
ಬ್ರೌಸರ್ ಮಾರುಕಟ್ಟೆ ಈಗಾಗಲೇ ಶೇ.46.6% ಜೂನ್ ಫೈರ್ ಫಾಕ್ಸ್, 15.7 IE8 ಇದೆ. ಎಪಿಕ್ ಮೂಲಕ ಯುವ ಸಮುದಾಯದ ಮನಗೆಲ್ಲುವಲ್ಲಿ ಮೋಝಿಲ್ಲಾ ಯಶಸ್ವಿಯಾಗಬಹುದು. ಮೋಝಿಲ್ಲಾ ಫೈರ್ ಫಾಕ್ಸ್ ಕೂಡ ಲಭ್ಯವಾಗುತ್ತಿದ್ದು, ಮಾರುಕಟ್ಟೆಯನ್ನು ತೋಳಗಳು ಸಂಪೂರ್ಣವಾಗಿ ನುಂಗುವ ಸಾಧ್ಯತೆಯಿದೆ.
ಆದ್ರೆ ಗಣಕದ ಮೆಮೊರಿಯನ್ನು ಎಪಿಕ್ ಹೆಚ್ಚು ಬಳಕೆ ಮಾಡುವುದರ ಮೂಲಕ ಕಡಿಮೆ ವೇಗದ ಗಣಕಗಳಲ್ಲಿ ಜನಪ್ರಿಯತೆ ಕಳೆದು ಕೊಳ್ಳುವ ಸಂಭವವೂ ಇದೆ. ಒಟ್ಟಾರೆ ಹೊಸದರ ಅನ್ವೇಷಣೆ, ಹುಡುಕಾಟಕ್ಕೆ ಹಾದಿ ತೋರುವ ಬ್ರೌಸರ್ ಗಳಿಗೆ ಜಾಲಿಗರು ಜಾರಿ ಹೋಗುವುದಂತೂ ಖಂಡಿತಾ.
ಡಿಸೈನ್, ಥೀಮ್ಸ್:4/5
ಸುರಕ್ಷತೆ: 4.5/5
ಗ್ರಾಹಕ ಸಂವೇದಿತನ:4/5
ತಾಂತ್ರಿಕತೆ:3.75/5
WOT ಎಂಬ ಸುರಕ್ಷಿತ ಬ್ರೌಸಿಂಗ್ ಗಾಗಿ ಇರುವ ಸಾಧನ ಕೂಡಾ ಇದರಲ್ಲಿದೆ. ಇದರ ಮೂಲಕ ನೀವು ವೀಕ್ಷಿಸುವ ಬ್ರೌಸರ್ ನ ಸುರಕ್ಷತೆ ಬಗ್ಗೆ ವೋಟ್ ಮಾಡಿ ತಿಳಿಸಬಹುದು. ಆತಂಕಕಾರಿ ತಾಣಗಳು ಕಂಡು ಬಂದರೆ ತಡೆಗಟ್ಟಲು ಇದು ಸಹಕಾರಿಯಾಗಿದೆ.
ಕೊನೆಯದಾಗಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಮೊಝಿಲ್ಲಾಗಾಗಿ ಎಪಿಕ್ ಅನ್ನು ಅಭಿವೃದ್ಧಿಪಡಿಸಿದ್ದು ಹಿಡನ್ ರಿಫ್ಲೆಕ್ಸ್ ಎಂಬ ಬೆಂಗಳೂರಿನ ಪುಟ್ಟ ಕಂಪೆನಿ. ಇನ್ನೇಕೆ ತಡ ನಿಮ್ಮ ಗಣಕಕ್ಕೆ ಎಪಿಕ್ ಬ್ರೌಸರ್ [http://www.epicbrowser.com/]ಅನ್ನು ಇಳಿಸಿಕೊಳ್ಳಿ.
http://vknews.wordpress.com/

ಭಾನುವಾರ, ಜುಲೈ 18, 2010

3 ಈಡಿಯಟ್ಸ್ ಚೇತನ್ ಭಗತ್, ಪುಸ್ತಕಗಳು 95 ರೂಗೆ ಒಂದು!

 ಚೇತನ್ ಭಗತ್ ಎಂದರೆ ಯಾರು? 







ಇಂಗ್ಲಿಷ್ ಪುಸ್ತಕ ಓದುವವರನ್ನು ಬಿಟ್ಟು ಬೇರೆ ಯಾರಿಗಾದರೂ ಈ ಪ್ರಶ್ನೆ ಹಾಕಿದರೆ, 'ಯಾವೋನಾದ್ರೆ ನನಗೇನು?' ಎಂಬಂತಹ ಪ್ರಶ್ನೆ ನಮಗೇ ವಾಪಸ್ ಎಸೆಯುತ್ತಿದ್ದರು. ಆದರೆ, ತ್ರೀ ಈಡಿಯಟ್ಸ್ ಚಿತ್ರ ನೋಡಿದವರಾದರೆ, ಅದರ ಬಗ್ಗೆ ಕೇಳಿದವರಾದರೆ, yes, I wanna meet Chetan one day, where can I ? can you give me the list of his works? where can I find his books? ಎನ್ನುತ್ತಾರೆ.
            ಭಾರತೀಯ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಕ್ರಾಂತಿ ಮಾಡಿದ, ಗಲ್ಲಾಪೆಟ್ಟಿಗೆಯಲ್ಲಿ ಹಿಂದಿನ ದಾಖಲೆಗಳನ್ನು ಧೂಳಿಪಟ ಮಾಡಿರುವ ವಿಧುವಿನೋದ್ ಚೋಪ್ರಾ ನಿರ್ಮಿಸಿ, ರಾಜಕುಮಾರ್ ಹಿರಾಣಿ ನಿರ್ದೇಶಿಸಿರುವ, ಅಮೀರ್ ಖಾನ್ ಪ್ರಮುಖವಾಗಿ ನಟಿಸಿರುವ 'ತ್ರೀ ಈಡಿಯಟ್ಸ್' ಬಿಡುಗಡೆಯ ನಂತರ ಚೇತನ್ ಭಗತ್ ಎಂಬ ಹೆಸರು ಮನೆಮಾತು.
           ತ್ರೀ ಈಡಿಯಟ್ಸ್ ಚಿತ್ರ ಚೇತನ್ ಭಗತ್ ಬರೆದ ಬೆಸ್ಟ್ ಸೆಲ್ಲರ್ 'ಫೈವ್ ಪಾಯಿಂಟ್ ಸಮ್ವನ್ - ವಾಟ್ ನಾಟ್ ಟು ಡು ಅಟ್ ಐಐಟಿ' ಆಂಗ್ಲ ಕೃತಿ ಆಧರಿಸಿ ನಿರ್ಮಿತವಾಗಿದೆ. ಚಿತ್ರ ನಿರ್ಮಾಪಕರು ತಮ್ಮ ಹೆಸರನ್ನು ಸೂಕ್ತವಾಗಿ ಬಳಸದೇ ಅನ್ಯಾಯ ಮಾಡಿದ್ದಾರೆ, ಜ್ಯೂನಿಯರ್ ಕಲಾವಿದರ ಹೆಸರಿನ ನಂತರ ತನ್ನ ಹೆಸರನ್ನು ಟೈಟಲ್ ಕಾರ್ಡಲ್ಲಿ ನಮೂದಿಸಿ ಅವಮಾನ ಮಾಡಿದ್ದಾರೆ ಎಂದು ಚೇತನ್ ಭಗತ್ ಹುಯಿಲೆಬ್ಬಿಸಿದ್ದರು. ಚಿತ್ರ ನಿರ್ಮಿಸಿದ ದಾಖಲೆ, ವಿವಾದದಿಂದ ಅದು ಎಬ್ಬಿಸಿದ್ದ ಧೂಳು ಎಷ್ಟೇ ಇರಲಿ, ಅದರಿಂದ ಲಾಭವಾದದ್ದು ಚೇತನ್ ಭಗತ್ ಅವರಿಗೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಅವರ ಪುಸ್ತಕಗಳು ಕಾಳಸಂತೆಯಲ್ಲಿ ಕಡಿಮೆ ದರಕ್ಕೆ ಮಾರಾಟವಾಗುತ್ತಿವೆ.

ಈ ವಿವಾದವೇನೇ ಇರಲಿ, ದೆಹಲಿಯಲ್ಲಿ ಹುಟ್ಟಿ, ಬೆಳೆದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು, ಐಐಎಂ ಅಹ್ಮದಾಬಾದಿನಲ್ಲಿ 'ಅತ್ಯುತ್ತಮ ವಿದ್ಯಾರ್ಥಿಯಾಗಿ' ಹೊರಬಿದ್ದ ಚೇತನ್ ಭಗತ್ ಸರಳ ಬರವಣಿಗೆ, ನವುರಾದ ನಿರೂಪಣೆ ಮತ್ತು ವಿಶಿಷ್ಟ ಕಥನಶೈಲಿಯಿಂದ ಜಗತ್ತಿನಾದ್ಯಂತ ಮನೆಮಾತಾಗಿದ್ದಾರೆ. ಅವರ 'ಫೈವ್ ಪಾಯಿಂಟ್ ಸಮ್ವನ್ - ವಾಟ್ ನಾಟ್ ಟು ಡು ಅಟ್ ಐಐಟಿ', 'ಒನ್ ನೈಟ್ ಅಟ್ ದಿ ಕಾಲ್ ಸೆಂಟರ್', 'ದಿ ತ್ರೀ ಮಿಸ್ಟೇಕ್ಸ್ ಆಪ್ ಮೈ ಲೈಫ್ ಅಂಡ್ 2 ಸ್ಟೇಟ್ಸ್' ಮತ್ತು 'ದಿ ಸ್ಟೋರಿ ಆಫ್ ಮೈ ಮ್ಯಾರೇಜ್' ಪುಸ್ತಕಗಳು ಬೆಸ್ಟ್ ಸೆಲ್ಲರ್ ಲಿಸ್ಟಿನಲ್ಲಿ ಕಾಣಿಸಿಕೊಂಡಿವೆ.

ತ್ರೀ ಈಡಿಯಟ್ಸ್ ಚಿತ್ರ ಚೇತನ್ ಭಗತ್ ಅವರ ಕಥನ ಕಲೆಯನ್ನು ಮಾತ್ರವಲ್ಲ, ಮ್ಯಾನೇಜ್ ಮೆಂಟ್ ಸಂಸ್ಥೆಗಳಲ್ಲಿ ಇರುವ ಹುಳುಕುಗಳನ್ನು ಕೂಡ ಜಗತ್ತಿಗೆ ಪರಿಚಯಿಸಿಕೊಟ್ಟಿದೆ. 'ಫೈವ್ ಪಾಯಿಂಟ್ ಸಮ್ವನ್ - ವಾಟ್ ನಾಟ್ ಟು ಡು ಅಟ್ ಐಐಟಿ' ಕೃತಿ ಚೇತನ್ ಭಗತ್ ಅವರ ಜೀವನ ಪುಟದಿಂದ ಹೆಕ್ಕಿದ ಒಂದು ಹಾಳೆಯೂ ಹೌದು.

ಮತ್ತೊಂದು ವೈಶಿಷ್ಟ್ಯವೆಂದರೆ, ಪುಸ್ತಕಗಳ ಶೀರ್ಷಿಕೆಗಳಲ್ಲಿ ಬಳಸಿರುವ ಸಂಖ್ಯೆಗಳು. ಫೈವ್, ಒನ್, ತ್ರೀ.... ಸಂಖ್ಯೆಗಳೊಂದಿಗೆ ಅವರು ಬಿಟ್ಟೂಬಿಡದ ನಂಟು. ಪ್ರತಿಯೊಂದರಲ್ಲೂ ಲೆಕ್ಕಾಚಾರ. ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿ ಡಾಯಿಶ್ ಬ್ಯಾಂಕಿನಲ್ಲಿ 11 ವರ್ಷ ಹಾಂಗ್ ಕಾಂಗಿನಲ್ಲಿ ಕೆಲಸ ಮಾಡಿದ ಚೇತನ್, ಪುಸ್ತಕಗಳು ಬ್ಯಾಂಕಿನಲ್ಲಿ ಹೊಸ ಅಕೌಂಟು ತೆರೆಸಿದ ನಂತರ, ಬ್ಯಾಂಕಿಂಗಿಗೆ ತಿಲಾಂಜಲಿಯಿತ್ತು ಕೈಯಲ್ಲಿ ಪೆನ್ನು ಹಿಡಿದಿದ್ದಾರೆ, ಅಕ್ಷರ ದುಡಿಮೆಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಹಿಂದಿ ಚಿತ್ರ ಹಲೋ ಕೂಡ ಭಗತ್ ಅವರ ಕೃತಿ " ಒನ್ ನೈಟ್ ಅಟ್ ದಿ ಕಾಲ್ ಸೆಂಟರ್ ' ಆಧರಿಸಿದ್ದು.

ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಸಿದ ಆಂಗ್ಲ ಲೇಖಕ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಹೊಗಳಿದೆ. ಕೇವಲ 35 ವರ್ಷ ವಯಸ್ಸಿನ ಚೇತನ್ ಭಗತ್ ಯುವ ಪೀಳಿಗೆಯಲ್ಲಿ ಮತ್ತೆ ಮತ್ತೆ ಓದುವ ಗೀಳಿಗೆ ಯುವಜನತೆಯನ್ನು ಹಚ್ಚಿದ್ದಾರೆ. ದೈನಿಕ್ ಭಾಸ್ಕರ್ ಹಿಂದಿ ಪತ್ರಿಕೆ ಮತ್ತು ದಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದಾರೆ.

ಚೇತನ್ ಅಂದರೆ ನಿಜಕ್ಕೂ ಕ್ರಿಯಾಶೀಲ ಚೇತನ. ಬಾಲಕನಾಗಿದ್ದಾಗಲೇ ಬರೆಯುವ ಗೀಳು ಅಂಟಿಸಿಕೊಂಡಿದ್ದರು. ಬಾಲ್ಯದಲ್ಲಿ ಅವರು ಹೊಟೇಲ್ ಅಡುಗೆಯವ ಆಗಬೇಕೆಂದು ಅಂದುಕೊಂಡಿದ್ದರಂತೆ. ಆದರೆ, ಧಡೂತಿ ಚೆಫ್ ಗಳನ್ನು ನೋಡಿ 35 ಆಗುವುದರೊಳಗೆ ಹೃದಯಾಘಾತವಾಗಿ ಸತ್ತುಹೋಗುತ್ತೇನೆಂದು ತಮ್ಮ ಆಸೆಯ ಚಿಗುರನ್ನು ಬಾಲ್ಯದಲ್ಲಿಯೇ ಚಿವುಟಿ ಹಾಕಿದ್ದರಂತೆ.
ಚೇತನ್ ಭಗತ್ ಅವರ ಎರಡು ಶೀರ್ಷಿಕೆಗಳು ಕಡಿಮೆ ಬೆಲೆಯಲ್ಲಿ ಆನ್ ಲೈನ್ ಖರೀದಿಗೆ ಇಲ್ಲಿ ಲಭ್ಯ. ಓದಿ :
2 States: The story of My Marriage
One Night @ the Call Center

ಮೊಬೈಲನ್ನು ಸ್ಮಾರ್ಟ್ ಫೋನ್ ಮಾಡಿಕೊಳ್ಳಿ


ಮೊಬೈಲ್ ಫೋನ್ ನಲ್ಲಿ ಯಾವುದೇ ಕಿರಿಕಿರಿ ಇಲ್ಲದೆ ಇಮೇಲ್ ಓದಿ, ಪ್ರತಿಕ್ರಿಯಿಸುವ ಸೌಲಭ್ಯ ಲಭ್ಯವಾದರೆ ಯಾರು ತಾನೆ ಬೇಡ ಎನ್ನುವುದಿಲ್ಲ. ಬೆಂಗಳೂರು ಮೂಲದ ಮೊಬೈಲ್ ಅನ್ವಯ ತಂತ್ರಾಂಶ ಅಭಿವೃದ್ಧಿ ಸಂಸ್ಥೆ ಫಿಫ್ತ್ ಸಿ ಸಲ್ಯೂಷನ್ಸ್ (Fifth C) ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ.

ಜಿಪಿಆರ್ ಎಸ್(GPRS) , ಮೊಬೈಲ್ ಇಂಟರ್ ನೆಟ್ ಯೋಜನೆ ಅಥವಾ ದುಬಾರಿ ವೆಚ್ಚದ ಸ್ಮಾರ್ಟ್ ಫೋನ್ ಇಲ್ಲದಿರುವ ಅನೇಕ ಗ್ರಾಹಕರಿಗೆ ಬ್ಲಾಕ್ ಮೇಲ್ ಎಂಬ ಮೌಲ್ಯಾಧಾರಿತ ಸೇವೆ(VAS) ವರದಾನವಾಗಲಿದೆ.

ಎಲ್ಲಿ ಲಭ್ಯ? ಏನು ಉಪಯೋಗ: ಬ್ಲಾಕ್ ಮೇಲ್ ಸೇವೆ ಸದ್ಯಕ್ಕೆ ಯೂನಿವರ್ಸೆಲ್ ಹಾಗೂ ಸಂಗೀತಾ ಮೊಬೈಲ್ ಮಳಿಗೆಗಳಲ್ಲಿ ಲಭ್ಯವಿದೆ. ಕೆಫೆ ಕಾಫಿ ಡೇ ಅಥವಾ ದುಬಾರಿ ಕಾಫಿ ಪ್ರಿಯರ ಒಂದು ಕಪ್ ಕಾಫಿ ಬೆಲೆ ತೆತ್ತರೆ ನಿಮ್ಮ ಫೋನ್ ಗೆ ಬ್ಲಾಕ್ ಮೇಲ್ ಸೇವೆ ಲಭ್ಯ ಎಂದು ಸಂಸ್ಥೆ ಜಾಹೀರಾತು ನೀಡುತ್ತಿದೆ.

ಸುಮಾರು 49 ರು ನೀಡಿ ಜಿಪಿಆರ್ ಸಿ ಅಥವಾ ಸ್ಮಾರ್ಟ್ ಫೋನ್ ನಲ್ಲಿ ಸಿಗಬಹುದಾದ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ ಬ್ಲಾಕ್ ಬೆರಿ ರೀತಿಯ ಸ್ಮಾರ್ಟ್ ಫೋನ್ ಗಳಲ್ಲಿ ಸಿಗುವ ಮೌಲ್ಯಾಧಾರಿತ ಸೇವೆಗಳು ಕೇವಲ 49 ರು.ಗಳಿಗೆ ನಿಮಗೆ ಲಭ್ಯವಾಗಲಿದೆ.

ಬ್ಲಾಕ್ ಮೇಲ್ ಸೇವೆ ಪಡೆಯಲು ನಿಮ್ಮ ಮೊಬೈಲ್ ಫೋನ್ ನಲ್ಲಿ ಜಾವಾ ಸೌಲಭ್ಯ ಇದ್ದರೆ ಸಾಕು. ಈಗಂತೂ ಎಲ್ಲಾ ಮೊಬೈಲ್ ಗಳಲ್ಲಿ ಜಾವಾ ಸೌಲಭ್ಯ ಇರುತ್ತದೆ ಅಲ್ಲದೆ ಅದು ಹೈ ಎಂಡ್  ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಅತ್ಯಂತ ಮಿತವ್ಯಯಿ ಕೂಡ.

ಬ್ಲಾಕ್ ಮೇಲ್ ಸೇವೆಯು ಜಿಎಸ್ ಎಂ ಸೇವೆಯುಳ್ಳ ಎಲ್ಲಾ ಬಗೆಯ ಮೊಬೈಲ್ ಗಳಲ್ಲಿ ಬ್ಲಾಕ್ ಮೇಲ್ ಅಳವಡಿಸಬಹುದು ಹೀಗಾಗಿ ವಿಸ್ಟೃತ ಸಂಪರ್ಕ ಜಾಲ ಹಾಗೂ ನಂಬರ್ ಪೋರ್ಟಬಲಿಟಿ ಆದರೂ ನಿರಂತರ ಸಂಪರ್ಕ ಹೊಂದಲು ಸಾಧ್ಯವಿದೆ.

ಹೆಚ್ಚಾಗಿ ವಿದ್ಯಾರ್ಥಿಗಳು ಹಾಗೂ ಯುವ ಉದ್ಯೋಗಿಗಳನ್ನು ಆಕರ್ಷಿಸಲು ಬ್ಲಾಕ್ ಮೇಲ್ ರೂಪಿಸಲಾಗಿದೆ. ಫೇಸ್ ಬುಕ್, ಆರ್ಕುಟ್ ಮುಂತಾದ ಸೋಷಿಯಲ್ ನೆಟ್ ವರ್ಕಿಂಗ್ , ಉದ್ಯೋಗವಕಾಶ ಶೋಧನೆಗೆ ನೌಕ್ರಿ, ಮಾನ್ ಸ್ಟರ್ ಮುಂತಾದ ತಾಣಗಳನ್ನು ವೀಕ್ಷಿಸಬಹುದು. ಅಲ್ಲದೆ ತ್ವರಿತ ಗತಿಯಲ್ಲಿ ಇಮೇಲ್ ಸೌಲಭ್ಯವನ್ನು ಹೊಂದಲು ಬ್ಲಾಕ್ ಮೇಲ್ ಸಹಕಾರಿ ಎಂದು ಸಂಸ್ಥೆ ಹೇಳಿದೆ.

ಬ್ಲಾಕ್ ಮೇಲ್ ಸೌಲಭ್ಯ ತಂತ್ರಾಂಶವನ್ನು (www.blacmail.in) ತಾಣದಿಂದ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ನಂತರ ಮೊಬೈಲ್ ಮಳಿಗೆಗಳಲ್ಲಿ ರು.49 ನೀಡಿ ಮೌಲ್ಯಾಧಾರಿತ ಸೇವೆ ಪಡೆಯಬಹುದು. ಒಟ್ಟಿನಲ್ಲಿ ಬ್ಲಾಕ್ ಮೇಲ್ ಮೂಲಕ ಸಾಧಾರಣ ಮೊಬೈಲನ್ನು ಸ್ಮಾರ್ಟ್ ಫೋನ್ ನಂತೆ ಬಳಸಬಹುದು ಎನ್ನುತ್ತದೆ ಫಿಫ್ತ್ ಸಿ ಸಲ್ಯೂಷನ್ ಸಂಸ್ಥೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Fifth C Solutions Pvt. Ltd, Bangalore.

ಗುರುವಾರ, ಜುಲೈ 15, 2010

ಕೊನೆಗೂ ಸಿಕ್ಕಿದೆ ಭಾರತೀಯ ರೂಪಾಯಿಗೊಂದು ಲಾಂಛನ

ಭಾರತೀಯರ ಬಹುದಿನಗಳ ಕನಸಿಗೆ ಕೇಂದ್ರ ಸರಕಾರವು ಇಂದು ಅಸ್ತು ಎಂದಿದೆ. ವಿಶ್ವದ ಇತರ ಕರೆನ್ಸಿಗಳಿಗೆ ಇರುವಂತೆ ಭಾರತೀಯ ರೂಪಾಯಿಗೂ ಲಾಂಛನ ಬೇಕೆಂಬ ಬೇಡಿಕೆ ಇಂದು ಈಡೇರಿದೆ. ಸರಕಾರವು ಹಿಂದಿ ‘र’ ಅಕ್ಷರವನ್ನು ಹೋಲುವ ಲಾಂಛನಕ್ಕೆ ಅಂತಿಮ ಮುದ್ರೆಯನ್ನೊತ್ತಿದೆ.
 
ಇದರೊಂದಿಗೆ ಜಾಗತಿಕ ಕರೆನ್ಸಿಗಳಾದ ಅಮೆರಿಕನ್ ಡಾಲರ್ ($), ಬ್ರಿಟೀಷ್ ಪೌಂಡ್ (£), ಐರೋಪ್ಯ ಒಕ್ಕೂಟದ ಯೂರೋ (€) ಮತ್ತು ಜಪಾನ್‌ನ ಯೆನ್ (¥) ಸಾಲಿಗೆ ಭಾರತದ ರೂಪಾಯಿಯೂ ಸೇರ್ಪಡೆಯಾಗಿದೆ.
ರೂಪಾಯಿಯ ಲಾಂಛನಕ್ಕಾಗಿ ಸಾರ್ವಜನಿಕರು ಸೂಕ್ತ ವಿನ್ಯಾಸಗಳನ್ನು ಕಳುಹಿಸಿಕೊಂಡುವಂತೆ ಸರಕಾರವು ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬಂದಿದ್ದ ಸಾವಿರಾರು ಲಾಂಛನಗಳಲ್ಲಿ ಸುಮಾರು 100ರಷ್ಟು ಗಮನ ಸೆಳೆದಿದ್ದವು. ಅವುಗಳಲ್ಲಿ ಇದೀಗ ಒಂದು ಸಿಂಬಲ್ ಅಂತಿಮಗೊಂಡಿದೆ. ಮುಂದಿನ ದಿನಗಳಲ್ಲಿ ಭಾರತೀಯ ರೂಪಾಯಿಯನ್ನು ಇದೇ ಲಾಂಛನ ಪ್ರತಿನಿಧಿಸಲಿದೆ ಎಂದು ಕೇಂದ್ರ ಸರಕಾರ ಘೋಷಿಸಿದೆ.
ಇದೀಗ ಆಯ್ಕೆಯಾಗಿರುವ ಲಾಂಛನದ ಸೂತ್ರಧಾರಿ ಡಿ. ಉದಯ ಕುಮಾರ್. ಐಐಟಿ ಗುವಾಹತಿಯ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ಇವರು ‘र’ ಅಕ್ಷರವನ್ನು ಬಳಸಿ ಲಾಂಛನವನ್ನು ವಿನ್ಯಾಸಗೊಳಿಸಿದ್ದರು. ಇವರಿಗೆ 2.5 ಲಕ್ಷ ರೂಪಾಯಿ ಬಹುಮಾನವನ್ನು ನೀಡಲಾಗುತ್ತದೆ ಎಂದು ಸರಕಾರ ತಿಳಿಸಿದೆ.
ಇದು ತಿರಂಗದ ಸಂಕೇತ…
ತನ್ನ ವಿನ್ಯಾಸದ ಲಾಂಛನವನ್ನು ಕೇಂದ್ರ ಸಂಪುಟವು ಆಯ್ಕೆ ನಡೆಸಿದ್ದಕ್ಕೆ ಸಂತೋಷದಿಂದ ಪ್ರತಿಕ್ರಿಯಿಸಿರುವ ಉದಯ್ ಕುಮಾರ್, ಇದು ತಿರಂಗವನ್ನು ಆಧರಿಸಿದ್ದಾಗಿತ್ತು ಎಂದಿದ್ದಾರೆ.
ಈ ಲಾಂಛನ ಮೇಲ್ಭಾಗವು ಭಾರತದ ರಾಷ್ಟ್ರಧ್ವಜವನ್ನು ಹೋಲುತ್ತದೆ. ಮೇಲಿನ ಎರಡು ರೇಖೆಗಳ ನಡುವಿನ ಜಾಗವು ಧ್ವಜದ ಬಿಳಿ ಬಣ್ಣವನ್ನು ಸಂಕೇತಿಸುತ್ತದೆ. ಭಾರತದ ರಾಷ್ಟ್ರಧ್ವಜ ರೂಪಾಯಿಯ ಸಂಕೇತದಲ್ಲಿ ಬರಬೇಕು ಎಂಬುವುದು ನನ್ನ ಆಸೆಯಾಗಿತ್ತು ಎಂದು ವಿವರಣೆ ನೀಡಿದ್ದಾರೆ.
ಅಲ್ಲದೆ ಇದರಲ್ಲಿ ರೋಮನ್ ಅಕ್ಷರ ‘R’ ಮತ್ತು ದೇವನಾಗರಿಯ ‘र’ ಅಕ್ಷರ ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಸಂಕೇತವು ಭಾರತೀಯರಿಗೆ ಮತ್ತು ವಿದೇಶಿಗರಿಗೂ ಇಷ್ಟವಾಗಲಿದೆ ಎಂದು ಉದಯ್ ಅಭಿಪ್ರಾಯಪಟ್ಟಿದ್ದಾರೆ.
ಭಾರತಕ್ಕೆ ಇದರ ಅಗತ್ಯವಿತ್ತು…
ಜಾಗತಿಕ ವಲಯದಲ್ಲಿ ಗಮನ ಸೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗುತ್ತಿರುವುದು ಇತ್ತೀಚಿನ ವರ್ಷಗಳ ಬೆಳವಣಿಗೆ. ಅದರಂತೆ ಇತರ ಹಲವು ಪ್ರಮುಖ ರಾಷ್ಟ್ರಗಳು ಹೊಂದಿರುವಂತೆ ಭಾರತೀಯ ರೂಪಾಯಿಗೂ ಒಂದು ಲಾಂಛನ ಬೇಕಾಗಿತ್ತು.
ವಿದೇಶಿ ಕರೆನ್ಸಿಗಳು ಸ್ವಂತ ಸಂಕೇತಾಕ್ಷರಗಳ (USD, GDP, JPY, EUR) ಜತೆ ಲಾಂಛನಗಳನ್ನೂ ಹೊಂದಿವೆ. ಆದರೆ ಭಾರತವು ತನ್ನ ರೂಪಾಯಿಗೆ ಇದುವರೆಗೆ ಕೇವಲ ಸಂಕೇತಾಕ್ಷರಗಳನ್ನು ಮಾತ್ರ ಹೊಂದಿತ್ತು.
Rs’, ‘Re’, ‘INR’ ಎನ್ನುವುದೇ ಈ ಸಂಕೇತಾಕ್ಷರಗಳು. ಅದಕ್ಕಿಂತಲೂ ಗೊಂದಲದ ವಿಚಾರವೆಂದರೆ ಇವುಗಳಲ್ಲಿ ಮೊದಲೆರಡನ್ನು ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾಗಳೂ ಬಳಸುತ್ತಿರುವುದು. ಹಾಗಾಗಿ ಭಾರತಕ್ಕೆ ತನ್ನದೇ ಆದ ಲಾಂಛನ ಹೊಂದಿರಬೇಕಾದ ಅಗತ್ಯವಿತ್ತು.

ಮಂಗಳವಾರ, ಜುಲೈ 13, 2010

ಲ್ಯಾಪ್ ‌ಟಾಪ್‌ನೊಳಗೊಬ್ಬ ಖಾಸಗಿ ಗೂಢಚಾರ!

ದುಬಾರಿ ಬೆಲೆ ತೆತ್ತು ತಂದ ಲ್ಯಾಪ್‌ಟಾಪ್ ಕಳ್ಳತನವಾದರೆ? ನಿನ್ನೆ ಕೊಂಡಸ್ಮಾರ್ಟ್‌ಫೋನ್ ಕಳೆದುಕೊಂಡರೆ. ಮನೆಯಲ್ಲಿ, ಕಾರ್‌ನಲ್ಲಿ ಇಟ್ಟಿದ್ದ ಟ್ಯಾಬ್ಲೆಟ್,ನೆಟ್‌ಬುಕ್, ಮೊಬೈಲ್‌ಗಳು ಹಾಡಹಗಲೇ ಕಳುವಾದರೆ ಏನು ಮಾಡುವುದು? ಚಿಂತಿಸಲೇ ಬೇಕಾಗಿಲ್ಲ.ನಿಮ್ಮ ಲ್ಯಾಪ್‌ಟಾಪ್‌ನೊಳಗೊಂದು ಖಾಸಗಿ ಗೂಢಚಾರನನ್ನು ನೇಮಿಸಿ, ನಿಶ್ಚಿಂತೆಯಾಗಿರಿ...
ಇಸ್ತ್ರೇಲಿನ ಬರುಚ್ ಸಿಯನ್ನಾ ಎಂಬ ಉದ್ಯಮಿಯೊಬ್ಬ ತನ್ನ ಮಗನ ಹುಟ್ಟುಹಬ್ಬಕ್ಕೆಲ್ಯಾಪ್‌ಟಾಪ್ ಒಂದನ್ನು ಉಡುಗೊರೆಯಾಗಿ ನೀಡಿದ. ಪಾರ್ಟಿಯೊಂದರಲ್ಲಿ ಭಾಗವಹಿಸಿದಸಂದರ್ಭದಲ್ಲಿ ಆತ ಈ ದುಬಾರಿ ಬೆಲೆಯ ಮ್ಯಾಕ್‌ಬುಕ್ ಅನ್ನು ಕಳೆದುಕೊಂಡ.
ಮುಂದೇನು ಮಾಡುವುದು? ಸಿಯನ್ನಾ ಸ್ಥಳೀಯ ಪೊಲೀಸರ ಮೊರೆ ಹೋದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲರಿಗೂ ಹೇಳುವಂತೆ ಈತನಿಗೂ ಹುಡುಕಿ ಕೊಡುತ್ತೇವೆ ಎಂದು ಹೇಳಿ ಕಳುಹಿಸಿದರು.ಸಿಯನ್ನಾ ಒಂದು ತಿಂಗಳು ಕಾದ, ಮತ್ತೆರಡು ತಿಂಗಳು ಪೊಲೀಸ್ ಠಾಣೆ ಸುತ್ತಿದ.

ಲ್ಯಾಪ್ ಟಾಪ್ ಮಾತ್ರ ಎಲ್ಲಿಯೂ ಪತ್ತೆಯಾಗಲಿಲ್ಲ. ಮತ್ತೆ ಪೊಲೀಸರನ್ನು ಕೇಳಿದ್ದಕ್ಕೆ,ಅವರು, ‘ಇಂತಹ ಸಾವಿರಾರು ಲ್ಯಾಪ್‌ಟಾಪ್‌ಗಳು ಕಳೆದುಹೋಗಿರುತ್ತವೆ, ನಿಮ್ಮ ಲ್ಯಾಪ್‌ಟಾಪ್ ಎಲ್ಲಿಯಂತ ಹುಡುಕಿ ಕೊಡೋಣ, ಸಿಕ್ಕಿದರೆ ಕೊಡುತ್ತೇವೆ, ಸದ್ಯಕ್ಕೆ ನೀವದನ್ನು ಮರೆತುಬಿಡುವುದೇ ಒಳ್ಳೆಯದು’ ಎಂದು ಹೇಳಿದರು.

ಆದರೆ ಸಿಯನ್ನಾನ ಮಗ ಜಾಣ. ಲ್ಯಾಪ್‌ಟಾಪ್ ಕೈಗೆ ಬಂದಿದ್ದೇ ಆತ ತಂದೆಯ ಗಮನಕ್ಕೆ ಬರದೆಅದರಲ್ಲಿ ಖಾಸಗಿ ಗೂಢಾಚಾರ ತಂತ್ರಾಂಶ ಒಂದನ್ನು ಅಳವಡಿಸಿದ್ದ. (antitheft program)ಗಣಕಯಂತ್ರದ ಅಸಲಿ ಬಳಕೆದಾರನ ಹೆಸರನ್ನು ಬಿಟ್ಟು ಬೇರೆ ಯಾರಾದರೂ ಹೊಸದಾಗಿ ಲಾಗಿನ್ ಆದರೆ ಈ ಗೂಢಾಚಾರ ತಂತ್ರಾಂಶಕ್ಕೆ ಗೊತ್ತಾಗುತ್ತದೆ.

ಗಣಕಯಂತ್ರದಲ್ಲಿ ಅಂತರ್ಜಾಲ ಪುಟ ತೆರೆದುಕೊಳ್ಳುತ್ತಿದ್ದಂತೆ ಈ ತಂತ್ರಾಂಶ ಆ ವೆಬ್‌ಪುಟಗಳ ಸ್ಕ್ರೀನ್‌ಶಾಟ್ ತೆಗೆದು ಅಸಲಿ ಬಳಕೆದಾರನ ಖಾತೆಗೆ ರವಾನಿಸಲು ತೊಡಗುತ್ತದೆ.

ಅಷ್ಟೇ ಅಲ್ಲ, ಇದರಲ್ಲಿ ಗುಪ್ತವಾಗಿ ಅಳವಡಿಸಲಾಗಿರುವ ವೆಬ್‌ಕ್ಯಾಮ್ (built-incamera)ಲ್ಯಾಪ್‌ಟಾಪ್ ಪರದೆಯ ಮುಂದಿರುವ ವ್ಯಕ್ತಿಯ ಚಿತ್ರ ತೆಗೆಯುತ್ತದೆ. ಜೊತೆಗೆ ಸದ್ಯ ಲ್ಯಾಪ್‌ಟಾಪ್ ಯಾವ ಪ್ರದೇಶದಲ್ಲಿದೆ ಎನ್ನುವ ವಿವರವನ್ನೂ ಈ ತಂತ್ರಾಂಶ ರವಾನಿಸುತ್ತದೆ.

ದೂರದಿಂದಲೇ ಈ ತಂತ್ರಾಂಶವನ್ನು ಚಾಲನೆಗೊಳಿಸಬಹುದು. ಲ್ಯಾಪ್‌ಟಾಪ್ ಕಳುವಾಗುತ್ತಿದ್ದಂತೆಸಿಯನ್ನಾನ ಮಗ ಇದನ್ನು ಚಾಲನೆಗೊಳಿಸಿದ್ದ, ಇದು ನೀಡಿದ ವಿವರಗಳನ್ನು ಆಧರಿಸಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಲ್ಯಾಪ್‌ಟಾಪ್ ಕಳ್ಳನನ್ನು ಕೊನೆಗೂ ಪತ್ತೆ ಹಚ್ಚಿದರು. ಹೀಗೆ ಎಂಟು ತಿಂಗಳ ನಂತರ ಮ್ಯಾಕ್‌ಬುಕ್ ಮರಳಿ ಅವರ ಕೈಗೆ ಬಂತು.
ಅನೇಕ ಸಂದರ್ಭಗಳಲ್ಲಿ ಲ್ಯಾಪ್‌ಟಾಪ್ ಅನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗುತ್ತದೆ.ಐಪಾಡ್‌ಗಳು, ಇ-ಬುಕ್ ರೀಡರ್, ಸ್ಮಾರ್ಟ್‌ಪೋನ್ ಇತ್ಯಾದಿ ಉಪಕರಣಗೆಳಲ್ಲ ತೀರಾ ಹಗುರ ಹಾಗೂ ಆರಾಮವಾಗಿ ಕೈಯಲ್ಲಿ ಹಿಡಿದುಕೊಳ್ಳಬಹುದಾದ ಸರಕುಗಳಾಗಿರುವುದರಿಂದ ಯಾವಾಗಲೂಜೊತೆಯಲ್ಲಿಯೇ ಇರುತ್ತದೆ. ಹೀಗಾಗಿ ಇವುಗಳ ಕಳ್ಳತನ ಹೆಚ್ಚು.

2009ರ ಗಣಕಯಂತ್ರ ಅಪರಾಧ ಮತ್ತು ಭದ್ರತೆ ಸಮೀಕ್ಷೆಯ ಪ್ರಕಾರ 42% ರಷ್ಟು ಜನರು ಕಳೆದವರ್ಷ ತಮ್ಮ ಲ್ಯಾಪ್‌ಟಾಪ್‌ಗಳನ್ನು ಕಳೆದುಕೊಂಡಿದ್ದಾರೆ. ಅಮೆರಿಕದ ವಿಮಾನನಿಲ್ದಾಣಗಳಲ್ಲಿ ಪ್ರತಿವಾರ 12 ಸಾವಿರ ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳು ಕಳುವಾಗುತ್ತದೆ. ಆದರೆ ಇದರಲ್ಲಿ ಬಹುತೇಕ ಜನರು ಪೊಲೀಸ್ ಕಂಪ್ಲೇಂಟ್ ಕೊಡಲು ಹೋಗುವುದಿಲ್ಲ, ತಮ್ಮ ಅದೃಷ್ಟ ಹಳಿದುಕೊಂಡು ಸುಮ್ಮನಾಗುತ್ತಾರೆ.
ದುಬಾರಿ ಬೆಲೆ ತೆತ್ತು ತಂದ ಲ್ಯಾಪ್‌ಟಾಪ್ ಕಳ್ಳತನವಾದರೆ? ನಿನ್ನೆ ಕೊಂಡ ಸ್ಮಾರ್ಟ್‌ಫೋನ್ ಕಳೆದುಕೊಂಡರೆ. ಮನೆಯಲ್ಲಿ, ಗಾಡಿಯಲ್ಲಿಟ್ಟಿದ್ದ ಟ್ಯಾಬ್ಲೆಟ್, ನೆಟ್‌ಬುಕ್, ಮೊಬೈಲ್‌ಗಳು ಹಾಡುಹಗಲೇ ಕಳುವಾದರೆ ಏನು ಮಾಡುವುದು? ಯಾವಾಗಲೂ ಅದರ ಮೇಲೊಂದು ಕಣ್ಣಿಟ್ಟಿರಲು ಸಾಧ್ಯವಿಲ್ಲ. ಹಾಗಂತ ಈಗ ಚಿಂತಿಸಬೇಕಾಗಿಲ್ಲ. ನಿಮ್ಮಲ್ಯಾಪ್‌ಟಾಪ್‌ನೊಳಗೊಂದು ಖಾಸಗಿ ಗೂಢಚಾರನನ್ನು ನೇಮಿಸಿ, ನಿಶ್ಚಿಂತೆಯಾಗಿರಿ.
ಏನು? ಲ್ಯಾಪ್‌ಟಾಪ್‌ನೊಳಗೆ ಗೂಢಾಚಾರನೇ? ಹೌದು. ಈಗಂತೂ ಇಂತಹ ಹಲವು (antitheft program) ಪ್ರೊಗ್ರಾಂಗಳು ಲಭ್ಯವಿದೆ. ಲ್ಯಾಪ್‌ಟಾಪ್ ಮಾತ್ರವಲ್ಲ, ಐಫೋನ್, ಐಪಾಡ್,ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳಲ್ಲೂ ಇದನ್ನು ಅಳವಡಿಸಬಹುದು. ಈ ಉಪಕರಣಗಳು ಅಂತರ್ಜಾಲಸಂಪರ್ಕಕ್ಕೆ ಬಂದೊಡನೆ ಇದರೊಳಗಿರುವ ತಂತ್ರಾಂಶ ಕಾರ್ಯನಿರ್ವಹಿಸಲು ಆರಂಭಿಸುತ್ತದೆ.

‘ಇದು ಕದ್ದ ಲ್ಯಾಪ್‌ಟಾಪ್, ಇದನ್ನು ಇದರ ಅಸಲಿ ಮಾಲೀಕನಿಗೆ ಹಿಂತುರುಗಿಸಿ’ ಎಂಬ ಸಂದೇಶ ಪರದೆಯ ಮೇಲೆ ಮೂಡಿಸುತ್ತದೆ. ಇಂತಹ ತಂತ್ರಾಂಶಗಳಿಗೆ ಹಣ ತೆತ್ತಬೇಕು. ಕೆಲವು ಉಚಿತವಾಗಿಯೂ ದೊರೆಯುತ್ತದೆ. ಐದು ಅತ್ಯುತ್ತಮ ತಂತ್ರಾಂಶಗಳ ಮಾಹಿತಿ ಇಲ್ಲಿದೆ.

ಅಡೆಯೊನ (Adeona)

ಇದೊಂದು ಉತ್ತಮ ತಂತ್ರಾಂಶ. ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿಗಳು ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಅಡೆಯೊನವನ್ನು ಗಣಕಕ್ಕೆ ಅನುಸ್ಥಾಪಿಸಿದರೆ ಅದು ಕಳ್ಳತನವಾದಂತ ಸಂದರ್ಭದಲ್ಲಿ ನಕಲಿ ಬಳಕೆದಾರ ಲಾಗಿನ್ ಆಗುವ ವೆಬ್‌ಸೈಟ್ ವಿಳಾಸಗಳನ್ನು ತಿಳಿಸುತ್ತದೆ. ಹಾಗೂ ನಕಲಿ ಬಳಕೆದಾರನ ಚಿತ್ರ ತೆಗೆದು ರವಾನಿಸುತ್ತದೆ. ಲ್ಯಾಪ್ ಇರುವ ಸ್ಥಳದ ಮಾಹಿತಿ ನೀಡುತ್ತದೆ.
ಸದ್ಯಕ್ಕಿದು ಮ್ಯಾಕ್ ಆವೃತ್ತಿಯ ಲ್ಯಾಪ್‌ಟಾಪ್‌ಗಳಲ್ಲಿ ಮಾತ್ರ ಉಪಯೋಗಿಸಬಹುದು. ಇದೊಂದು ಓಪನ್-ಸೋರ್ಸ್ ತಂತ್ರಾಂಶವಾದರೂ ಲೀನಕ್ಸ್, ಮ್ಯಾಕ್ ಮತ್ತು ವಿಂಡೋಸ್ ಬಳಕೆದಾರರು ಮಾತ್ರ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮಾಹಿತಿಗೆ (
http://adeona.cs.washington.edu/)

ಗ್ಯಾಡ್ಜೆಟ್ ಟ್ರಾಕ್ (GadgetTrak )


ಮ್ಯಾಕ್ ಮತ್ತು ವಿಂಡೋಸ್ ಪಿಸಿಗಳಿಗೆ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಬ್ಲಾಕ್ಬೆರಿ, ಐಫೋನ್ ಮತ್ತು ವಿಂಡೋಸ್ ಮೊಬೈಲ್ ಆವೃತ್ತಿಗಳು ಲಭ್ಯವಿದೆ. ಎಲ್ಲ ಆವೃತ್ತಿಯೂ ಸೇರಿ ಒಂದು ವರ್ಷದ ಬಳಕೆಗೆ 24.95 ಡಾಲರ್ ದರ ವಿಧಿಸಲಾಗುತ್ತದೆ. ಕಳುವಾದಂತ ಸಂದರ್ಭದಲ್ಲಿ ಇದು ಪ್ರತಿ 30 ನಿಮಿಷಕ್ಕೆ ನಕಲಿ ಬಳಕೆದಾರನ ಚಿತ್ರ ತೆಗೆದು ರವಾನಿಸುತ್ತದೆ.
ಸದ್ಯ ಲ್ಯಾಪ್‌ಟಾಪ್ ಇರುವ ಜಾಗದ ಸೆಲ್‌ಫೋನ್ ಟವರ್ ಲೊಕೇಶನ್ ಮತ್ತು ಜಿಪಿಎಸ್ ಡೇಟವನ್ನು ಬಳಕೆದಾರನ ಫ್ಲಿಕ್ಕರ್ ಖಾತೆಗೆ ರವಾನಿಸುತ್ತದೆ. ಈ ಮಾಹಿತಿ ಆಧರಿತ ಬಳಕೆದಾರ ಲ್ಯಾಪ್‌ಟಾಪ್ ಇರುವ ಸ್ಥಳದ ನಕಾಶೆ ರಚಿಸಿಕೊಳ್ಳಬಹುದು. ಇದು ಕೊಡುವ ಸ್ಥಳ ಮಾಹಿತಿ ಎಷ್ಟು ನಿಖರ ಎಂದರೆ ಸೂಚಿಸಿದ ಸ್ಥಳದ 300 ಅಡಿ ಒಳಗೆ ಕಳುವಾದ ವಸ್ತು ಸಿಗುತ್ತದೆ. ಮಾಹಿತಿಗೆ -
http://www.gadgettrak.com/

ಲ್ಯಾಪ್‌ಟಾಪ್ ಕಾಪ್ (Laptop Cop )


ಈ ತಂತ್ರಾಂಶ ಪ್ರತಿಯೊಂದು ದೃಶ್ಯ, ಧ್ವನಿಯನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ  ಎನ್ನುತ್ತಾರೆ ಈ ತಂತ್ರಾಂಶದ ಜನಕ ಅವೇರ್‌ನೆಸ್ ಟೆಕ್ನೋಲಜಿಯ ಮುಖ್ಯ ಸ್ಥ ಟಾಮ್  ಬಿಲ್ಯು.ಇದು ಪ್ರತಿಯೊಂದು ಕಿಸ್ಟ್ರೋಕ್, ಯೂಸರ್‌ನೇಮ್, ಪಾಸ್‌ವರ್ಡ್, ಹಾಗೂ ವೆಬ್‌ಸೈಟ್  ವಿಳಾಸವನ್ನು ನಕಲಿಸಿ ಅಸಲಿ ಬಳಕೆದಾರನ ಖಾತೆಗೆ ರವಾನಿಸುತ್ತದೆ.
ಲ್ಯಾಪ್‌ಟಾಪ್ ಕಾಪ್ ತಂತ್ರಾಂಶವನ್ನು 49.95 ಡಾಲರ್ ತೆತ್ತು ಒಂದು ವರ್ಷಕ್ಕೆ ಕೊಳ್ಳಬಹುದು. 99.95 ಡಾಲರ್ ಕೊಟ್ಟರೆ ಮೂರು ವರ್ಷದ ಬಳಕೆಗೆ ಲಭ್ಯ. ಸದ್ಯ ಇದನ್ನು ವಿಂಡೋಸ್ ಆವೃತ್ತಿಯಲ್ಲಿ ಮಾತ್ರ ಬಳಸಲಾಗುತ್ತಿದೆ.

ಲ್ಯಾಪ್‌ಟಾಪ್ ಕಳುವಾದ ಸಂದರ್ಭದಲ್ಲಿ ಸ್ಕ್ರೀನ್ ಮೇಲೆ ‘ಇದು ನೀನು ಕದ್ದಿರುವ ಲ್ಯಾಪ್‌ಟಾಪ್, ಇದನ್ನು ವಾಪಸ್ಸು ಕೊಟ್ಟು ಬಿಡು, ಇಲ್ಲದಿದ್ದರೆ ಜೈಲಿಗೆ ಹೋಗ್ತೀಯಾ’ಇತ್ಯಾದಿ ಸಂದೇಶಗಳನ್ನು ಮೊದಲೇ ಬರೆದು ಅಳವಡಿಸಬಹುದು.

ಮಾಹಿತಿಗೆ -
http://www.laptopcopsoftware.com/ ಲೊ-ಜಾಕ್ ಫಾರ್ ಲ್ಯಾಪ್‌ಟಾಪ್ (LoJack for Laptops )ಸದ್ಯ ಹೆಚ್ಚು ಖರ್ಚಾಗುತ್ತಿರುವ ತಂತ್ರಾಂಶವಿದು. 1.2 ಶತಕೋಟಿ ಲ್ಯಾಪ್‌ಟಾಪ್ ಬಳಕೆದಾರರು 51 ದೇಶಗಳಲ್ಲಿ ಇದನ್ನು ಬಳಸುತ್ತಿದ್ದಾರೆ.
ಈ ತಂತ್ರಾಂಶದ ಲ್ಯಾಪ್‌ಟಾಪ್ ಆವೃತ್ತಿ 39.99 ಡಾಲರ್‌ಗೆ, ಪಿಸಿ, ಸ್ಮಾರ್ಟ್‌ಫೋನ್ ಹಾಗೂ ಮ್ಯಾಕ್ ಆವೃತ್ತಿ 59.99 ಡಾಲರ್‌ಗೆ ಲಭ್ಯವಿದೆ. ಹಲವು ಕಾರ್ಪೋರೇಟ್ ಕಂಪನಿಗಳು ತಮ್ಮ ಲ್ಯಾಪ್‌ಟಾಪ್‌ಗಳಲ್ಲಿ ಈ ತಂತ್ರಾಂಶವನ್ನು ಅಳವಡಿಸಿಕೊಂಡಿದೆ. ಒಂದು ವರ್ಷದ ಬಳಕೆಗೆ 40 ಡಾಲರ್ ಕೊಡಬೇಕು. ಮಾಹಿತಿಗೆ-
http://www.absolute.com/en/lojackforlaptops/home.aspx

ಅಂಡರ್‌ಕವರ್ (Undercover )

ಈ ತಂತ್ರಾಂಶವನ್ನು ಮ್ಯಾಕ್ ಮತ್ತು ಐಫೋನ್‌ಗಳಲ್ಲಿ ಅನುಸ್ಥಾಪಿಸಬಹುದು. ಇದು ಪ್ರತಿಬಾರಿ ಲಾಗಿನ್ ಆದಾಗಲೂ ನಕಲಿ ಬಳಕೆದಾರನ ಚಿತ್ರ ತೆಗೆದು ಅಸಲಿ ಬಳಕೆದಾರನ ಖಾತೆಗೆ ರವಾನಿಸುತ್ತದೆ. ಅಷ್ಟೇ ಅಲ್ಲ ಲ್ಯಾಪ್‌ಟಾಪ್‌ನಲ್ಲಿ ಅಂತರ್ಜಾಲ ಸಂಪರ್ಕ ತೆರೆದುಕೊಂಡರೆ ಆರು ನಿಮಿಷಗಳ ಒಳಗಾಗಿ ತಾನಾಗಿಯೇ ಚಿತ್ರ ತೆಗೆದು, ಈ ಚಿತ್ರಗಳನ್ನು ಬಳಕೆದಾರನ ಖಾತೆಗೆ
ಅಪ್‌ಲೋಡ್ ಮಾಡುತ್ತದೆ.
ಇದರಲ್ಲಿ ಅಳವಡಿಸಿರುವ ಸ್ಕೈಹುಕ್ ತಂತ್ರಜ್ಞಾನದ ಮೂಲಕ ಲ್ಯಾಪ್‌ಟಾಪ್ ಇರುವ ಸ್ಥಳದ ಮಾಹಿತಿಲಭಿಸುತ್ತದೆ. ಇದು ನಕಲಿ ಬಳಕೆದಾರನ ಇಮೇಲ್ ಮತ್ತು ಆತ ಭೇಟಿಕೊಟ್ಟ ಎಲ್ಲ ವೆಬ್‌ಸೈಟ್ ಪುಟಗಳ ಸ್ಕ್ರೀನ್‌ಶಾಟ್ ತೆಗೆದು ರವಾನಿಸುತ್ತದೆ. 59 ಡಾಲರ್ ತೆತ್ತು ಈ ತಂತ್ರಾಂಶ ಖರೀದಿಸಿದರೆ ಇದನ್ನು ಐದು ಗಣಕಯಂತ್ರದಲ್ಲಿ ಅಳವಡಿಸಬಹುದು.
ಆದರೆ ಇದು ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ. ಓರ್‌ಬಿಕಲ್ಸ್ (Orbicule’s) ಎನ್ನುವುದು ಅಗ್ಗದ ತಂತ್ರಾಂಶ. ಐಪಾಡ್ ಮತ್ತು ಐಫೋನ್‌ಗಳಲ್ಲಿ ಬಳಸಬಹುದು. ಸೀಮಿತ ಸೌಲಭ್ಯಗಳಿರುವ ಈ ತಂತ್ರಾಂಶದ ಬೆಲೆ 4.99 ಡಾಲರ್‌ಗಳು. ಇದರ ಐಫೋನ್ ಆವೃತ್ತಿ ಉಚಿತ.ಮಾಹಿತಿಗೆ-
http://www.orbicule.com /undercover /
ಅಂತರ್ಜಾಲದಲ್ಲಿ ಇಂತಹ ನೂರಾರು (antitheft program) ತಂತ್ರಾಂಶಗಳು ಲಭ್ಯವಿದೆ. ಉಚಿತ ಎಂದುಕೊಂಡು ಸಿಕ್ಕವುಗಳನ್ನು ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳಬೇಡಿ. ದುಡ್ಡು ಕೊಡದೆ ಈ ತಂತ್ರಾಂಶವನ್ನು ಹಾಕಿಕೊಂಡರೆ ಅದು ಯಾವ ಮಾಹಿತಿಯನ್ನೂ ನೀಡುವುದಿಲ್ಲ.
ಅಷ್ಟೇ ಅಲ್ಲ, ನೀವು ಉಚಿತ ಆವೃತ್ತಿ ಬಳಸುತ್ತಿದ್ದರೆ, ನಿಮ್ಮ ವೈಯಕ್ತಿಕ ವಿವರ, ಪಾಸ್‌ವರ್ಡ್, ಗಣಕಯಂತ್ರದ ಮಾಹಿತಿ ಜೊತೆಗೆ ನೀವಿರುವ ಸ್ಥಳದ ನಕ್ಷೆಯೊಂದಿಗೆ ಸೀದಾ ಇದನ್ನು ನಿರ್ಮಿಸಿದ ತಂತ್ರಾಂಶ ಕಂಪನಿಗಳಿಗೇ ವರದಿ ಒಪ್ಪಿಸುತ್ತದೆ. ಸುಮ್ಮನೆ ರಿಸ್ಕ್ ಯಾಕೆ? ದುಡ್ಡು ಕೊಟ್ಟು ಲ್ಯಾಪ್‌ಟಾಪ್‌ನೊಳಗೊಂದು ಖಾಸಗಿ ಗೂಢಚಾರನನ್ನು ನೇಮಿಸಿ, ನಿಶ್ಚಿಂತೆಯಾಗಿರಿ.....
Posted by ಬಿ.ಅ.ಮ.(ಬಾಳಾಯ)ತಿಂಗಳಾಡಿ 

ಗುರುವಾರ, ಜುಲೈ 8, 2010

ಪ್ರತಿ ಆರು ಸೆಕೆಂಡ್‌ಗೆ ಒಂದು ಮಗು ಬಲಿ......






-ಇದು ಬಡತನ ನಿರ್ಮೂಲನೆಯೇ?
- ಅಪೌಷ್ಟಿಕತೆಯಿಂದ ಬಳಲುತ್ತಿರುವ ದೇಶದ ಶೇ. ೪೭ ರಷ್ಟು ಮಕ್ಕಳು.
ನೀವು ಇದನ್ನು ನಂಬಲೇಬೇಕು.
ನೀವು ಯಾವತ್ತಾದರೂ ಹೊಟ್ಟೆ ತುಂಬಾ ಊಟ ಮಾಡುವ ಹೊತ್ತಿನಲ್ಲಿ ಜಗತ್ತಿನ ನೂರು ಕೋಟಿ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆಂಬುದನ್ನು ಯೋಚಿಸಿದ್ದೀರಾ? ಯಾರಿಂದಲೂ ಯೋಚಿಸಲು ಸಾಧ್ಯವಿಲ್ಲದ ಮಾತು. ಇವತ್ತು ನಾವು ಉಣ್ಣುತ್ತಿರುವ ಊಟದ ತಟ್ಟೆಗಳು ನಮ್ಮನ್ನು ನೋಡಿ ನಕ್ಕುತ್ತಿವೆ.ಕಾರಣ ನೆರೆಮನೆಯಾತನನ್ನು ಹಸಿವಿನಿಂದಿರಿಸಿ ಹೊಟ್ಟೆ ತುಂಬಾ ಉಂಡ ಕಾರಣ. ಬಡತನ ಎಂಬ ತುರ್ತುಪರಿಸ್ಥಿತಿಯನ್ನು ಇವತ್ತು ಜಗತ್ತು ಎದುರಿಸುತ್ತಿದೆ. ಆದರೆ ಇದನ್ನು ನಿರ್ಮೂಲನೆ ಮಾಡಬೇಕಾದರ ಬದಲು ಬಡತನ ನಿರ್ಮೂಲನೆ ಮಾಡಬೇಕಾದಂತಹ ಕಾನೂನುಗಳನ್ನು ಜಾರಿಗೆ ತಂದು ಬಡತನವನ್ನು ನಿವಾರಿಸುತ್ತೇವೆ ಎಂಬ ಬಲಾಢ್ಯ ರಾಷ್ಟ್ರಗಳ ಹೇಳಿಕೆಗಳು ಇವತ್ತು ಜಗತ್ತಿನ ನೂರು ಕೋಟಿ ಜನರನ್ನು ಹಸಿವಿನಿಂದಿರಿಸಿವೆ.
೨೦೧೫ರ ಹೊತ್ತಿಗೆ ಜಗತ್ತಿನ ಬಡತನವನ್ನು ಅರ್ಧಕ್ಕೆ ಇಳಿಸುವ ಯೋಚನೆ ಬಲಾಢ್ಯ ರಾಷ್ಟ್ರಗಳದ್ದು. ಆದರೆ ಧಗಧಗಿಸುವ ಹಸಿವಿನ ನಡುವೆ ಆಚರಿಸಿರುವ ವಿಶ್ವ ಆಹಾರ ದಿನದಂದೂ ಈ ನೂರು ಕೋಟಿ ಜನರ ಹಸಿವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ವಿಶ್ವ ಆರೋಗ್ಯ ಸಂಸ್ಥೆಗೆ. ಈ ನೆಲೆಯಲ್ಲಿ ೨೦೧೫ ರ ಹೊತ್ತಿಗೆ ಸಂಪೂರ್ಣವಾಗಿ ಹಸಿವನ್ನು ತಣಿಸಲು ಸಾಧ್ಯವೇ? ಇದು ಆಗದ ಮಾತು. ಜಗತ್ತಿನ ಬಿಡಿ. ಒಂದು ರಾಷ್ಟ್ರದಲ್ಲಿನ ಹಸಿವಿನಿಂದಿರುವ ಜನರ ಹಸಿವನ್ನು ತಣಿಸಲು ಸಾಧ್ಯವಾದರೆ ಅದುವೇ ದೊಡ್ಡ ಸಾಧನೆಯಾದೀತು ಅಮೆರಿಕದಂತಹ ಬಲಾಢ್ಯ ರಾಷ್ಟ್ರಗಳಿಗೆ. ಪ್ರಸಕ್ತ ಸನ್ನೀವೇಶದಲ್ಲಿ ಏರುತ್ತಿರುವ ಆಹಾರ ಧಾನ್ಯಗಳ ಬೆಲೆಯೇರಿಕೆ ಹಾಗೂ ಅಪೌಷ್ಠಿಕತೆಯ ಕಾರಣದಿಂದ ಇವತ್ತು ಹೆಚ್ಚಿನ ಜನತೆ ಹಸಿವಿನಿಂದ ನರಳಲು ಕಾರಣ.ಹೀಗಾಗಿ ಪ್ರತಿ ಆರು ಸೆಕೆಂಡ್‌ಗೆ ಒಂದು ಮಗು ಸಾವನ್ನಪ್ಪುತ್ತಿದೆ. ಅಂಕಿ ಅಂಶಗಳು ಇದಕ್ಕಾಗಿ ವೈಯಕ್ತಿಕವಾದ ಕಾರಣಗಳನ್ನು ನೀಡಿದರೆ ಇದು ಅಪ್ರಸ್ತುತ.
ಹಸಿವನ್ನು ನಿವಾರಿಸುವ ವಿಶ್ವಸಂಸ್ಥೆಯ ಮಾತು ನಿಜವೆನಿಸಲಾರದು.ಯಾಕೆಂದರೆ ಹಸಿವನ್ನು ತಕ್ಕಮಟ್ಟಿಗೆ ನಿವಾರಿಸಲು ಸಾಧ್ಯವಾಗಬಹುದೇ ಹೊರತು ಸಂಪೂರ್ಣವಾಗಿ ಅಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಸಿವಿನ ತೀವ್ರತೆ ಜನರ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ.ಹೀಗಾಗಿ ಹಸಿವಿನ ತೀವ್ರತೆ ಕೇವಲ ಸಾವೇ ಆಗಿರುತ್ತಿದ್ದರೆ ಹೆದರಬೇಕಾಗುತ್ತಿರಲಿಲ್ಲ. ಯಾಕೆಂದರೆ, ಇವತ್ತು ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವುದು ಇದರಿಂದಲೇ.ನಾವು ನಕ್ಸಲ್‌ರನ್ನು ನೋಡುತ್ತಿರುವುದು ಅವರ ಹಸಿವಿನ ತೀವ್ರತೆಯಿಂದ. ಒಂದು ರೀತಿಯಲ್ಲಿ ಸ್ಫೋಟಗೊಳ್ಳುತ್ತಿರುವ ಹಿಂಸಾಚಾರ, ದಂಗೆಗಳೆಲ್ಲವೂ ಹಸಿವಿನಿಂದಲೇ. ಇದಕ್ಕಾಗಿ ನಾವು ನೇರವಾಗಿ ದೇಶವೊಂದರ ಆಂತರಿಕ ಭದ್ರತೆಯನ್ನು ದೂರಿದರೇ ಸಾಲದು.ಜಾಗತಿಕವಾಗಿ ಹೆಚ್ಚುತ್ತಿರುವ ಹಸಿವಿನಿಂದ ಇವತ್ತು ಅನಕ್ಷರತೆ, ಬಡತನ, ಬಾಲಕಾರ್ಮಿಕರ ಸಂಖ್ಯೆಯ ಹೆಚ್ಚಳ, ಪಲಾಯನವಾದ, ಮುಂತಾದ ಅನೇಕ ತುರ್ತುಪರಿಸ್ಥಿತಿಯನ್ನು ನಾವು ನೋಡಬಹುದು.
ಭಾರತದಲ್ಲಿ ಶೇ.೪೭ ರಷ್ಟು ಮಕ್ಕಳು ಅಂದರೆ ಸುಮಾರು ಐದು ಸಾವಿರದಷ್ಟು ಮಕ್ಕಳು ಪೌಷ್ಟಿಕಾಂಶ, ಹಸಿವಿನ ತೀವ್ರತೆಯಿಂದ ಸಾಯುತ್ತಿದ್ದಾರೆ. ಅಂದರೆ ಹಸಿವಿನ ತೀವ್ರತೆ ಹೇಗಿದೆ ಎಂಬುದನ್ನು ನೀವೇ ಊಹಿಸಿ. ನಮ್ಮ ದೇಶದಲ್ಲಿ ಒಂದು ಕಡೆ ಬಡತನ ಹೆಚ್ಚುತ್ತಿದೆ. ಇನ್ನೊಂದು ಕಡೆ ಬಡತನದ ಕೆಳಗಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸರಕಾರದ ಅಂಕಿ‌ಅಂಶಿಗಳ ಭ್ರಷ್ಟಾಚಾರದಿಂದ. ಇದು ಭಾರತದ ಬಡತನ ನಿರ್ಮೂಲನೆ.ಹೀಗಾದರೆ ಭಾರತ ಬಡತನ ನಿರ್ಮೂಲನ ದೇಶವಾಗಬಹುದೇ? ಬಾಂಗ್ಲಾದೇಶ, ನೇಪಾಳ ಎಂಬ ಬಡ ರಾಷ್ಟ್ರ ಸಹ ಅಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಕಳಪೆ ಸ್ಥಾನವನ್ನು ಹೊಂದಿದೆ. ಇದಕ್ಕಿಂತಲೂ ಭಾರತ ಕಳಪೆ ಸ್ಥಾನದಲ್ಲಿದೆಯೆಂದರೇ? ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಕೇವಲ ಸಮಸ್ಯೆಯೆಂದು ಬಿಂಬಿಸುವ ಕಾರಣದಿಂದ ಇವತ್ತು ದೇಶ ಹಸಿವಿನ ತೀವ್ರತೆಕ್ಕೊಳಗಾಗಿದೆ. ಇದನ್ನೇ ಸಂಪನ್ಮೂಲ ಎಂದು ಬಗೆದರೆ ಯಾವತ್ತೂ ದೇಶಕ್ಕೆ ಹಸಿವೆಂಬುವುದು ಸಮಸ್ಯೆಯೆನಿಸುತ್ತಿರಲಿಲ್ಲ.
ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಚೀನಾ ಇವತ್ತು ತಮ್ಮಲ್ಲಿನ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಸಮಸ್ಯೆಯೆಂದು ಪರಿಗಣಿಸದ ಕಾರಣ ಇವತ್ತು ಚೀನಾ ಸಂಪನ್ಮೂಲವನ್ನು ಸರಿಯಾದ ನೆಲೆಯಲ್ಲಿ ಬಳಸುತ್ತಿದೆ. ಆದರೆ ಇದನ್ನು ಸರಿಯಾದ ಕ್ರಮವೆಂದು ಒಪ್ಪಿಕೊಳ್ಳಲು ಮುಂದಾಗದ ಕೇಂದ್ರ ಸರಕಾರ ಬಡತನ ನಿರ್ಮೂಲನೆಯಾಗಿದೆ ಎಂಬುದನ್ನು ಬಿಂಬಿಸಲು ಬಡತನದ ಕೆಳಗಿರುವವರ ಹೆಸರುಗಳನ್ನು ಪಡಿತರ ಚೀಟಿಯಿಂದ ತೆಗೆಯುವ ಘನಂದಾರಿ ಕೆಲಸವನ್ನು ಮಾಡುತ್ತಿದೆ. ಹಸಿದವರು ಒಂದು ಕಡೆ ನರಳುತ್ತಿದ್ದರೆ, ಇದು ಸರಕಾರಕ್ಕೆ ದೊಡ್ಡ ವಿಷಯವಲ್ಲ. ಬಡತನದ ಕೆಳಗಿರುವವರ ಸಂಖ್ಯೆಯ ಬಗ್ಗೆ ನಿಖರವಾದ ಅಂಕಿ‌ಅಂಶಗಳು ದೊರೆಯದಿರುವುದಕ್ಕೆ ಸರಕಾರದ ಭ್ರಷ್ಟಾಚಾರ ಕಾರಣ.
ನೀವು ಇದನ್ನು ನಂಬುತ್ತೀರೋ ಗೊತ್ತಿಲ್ಲ. ಆದರೆ ಇದಂತೂ ನಿಜ.ದೇಶದಲ್ಲಿ ಶೇ.೭೭ ರಷ್ಟು ಜನ ದಿನಕ್ಕೆ ೨೦ ರೂ.ಸಂಬಳಕ್ಕೆ ದುಡಿಯುತ್ತಿದ್ದಾರೆ. ಅಂದ ಮೇಲೆ ಇಂತಹವರ ಜೀವನ ವ್ಯವಸ್ಥೆ ಹೇಗಿರಬಹುದೆಂದು ನೀವೇ ಊಹಿಸಿ. ದೇಶದಲ್ಲಿ ಶೇ.೫೦ ರಷ್ಟು ಜನ ಹಸಿವಿನ ತೀವ್ರತೆಯಿಂದ ಬಳಲುತ್ತಿದ್ದಾರೆ.ಆದರೆ ಪಡಿತರ ಚೀಟಿ ವ್ಯವಸ್ಥೆಯಿರುವುದು ಕೇವಲ ಶೇ.೩೬. ಹೀಗಾದರೆ ಭಾರತದಲ್ಲಿ ಮಾತ್ರ ಅಲ್ಲ, ಜಗತ್ತಿನ ಹಸಿವಿನ ತೀವ್ರತೆಯನ್ನು ಎದುರಿಸುತ್ತಿರುವ ರಾಷ್ಟ್ರಗಳು ಬಡತನ ನಿರ್ಮೂಲನೆ ಮಾಡಲು ಸಾಧ್ಯವೇ? ಮಾತ್ರವಲ್ಲ, ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಶೇ.ಎಂಟರಷ್ಟಿದೆ. ಬಜತನ ಕಡಿಮೆಯಾಗುವುದರ ಬದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಹೋಗುತ್ತಿದೆ. ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನವನ್ನು ಹೊಂದಿದೆಯಾದರೂ ಮೂವತ್ತು ದಶಲಕ್ಷ ಭಾರತೀಯರಿಗೆ ಬೇಕಾಗುವ ಅವಶ್ಯಕತೆಗಳನ್ನು ಸರಿಯಾಗಿ ಪೂರೈಸದಿರುವ ಹಿನ್ನೆಲೆಯಲ್ಲಿ ಹಸಿವಿನ ಸ್ಥಾನವನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿ ಬಿಟ್ಟಿರುವುದು ವಿಪರ್ಯಾಸವಲ್ಲವೇ?
ಭಾರತದಲ್ಲಿ ಆದದ್ದೇನು ಎಂದರೆ ಹಸಿವು ಮತ್ತು ಆಹಾರದ ಹಕ್ಕನ್ನು ಕಾನೂನು ರೀತಿಯಲ್ಲಿ ವಿವರಿಸಿದೆಯೇ ಹೊರತು ಇದಕ್ಕೆ ಸಂಬಂಧಿಸಿ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಹಿಂದೇಟು ಹಾಕಲಾಗುತ್ತಿದೆ. ಇದು ದೇಶದಲ್ಲಿನ ಕಾರ್ಯಯೋಜನೆಯ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತಿದೆ. ರೋಗವಾಗಿ ಪರಿವರ್ತನೆಗೊಳ್ಳುತ್ತಿರುವ ಹಸಿವು ಇವತ್ತು ದೇಶದ ಮುಂದೆ ದೊಡ್ಡ ಸವಲಾನ್ನೇ ಇಟ್ಟಿದೆ. ಇದು ಹೇಗೆ ಸಮಾಜ ವಿರೋಧಿ ಚಟುವಟಿಕಗಳ ಸೃಷ್ಟಿಗೆ ಕಾರಣವಾಗುತ್ತದೋ ಹಾಗೆಯೇ ವಿವಿಧ ರೋಗಗಳ ಸೃಷ್ಟಿಗೆ ಕಾರಣವಾಗುತ್ತಿದೆ. ೧.೯ ಮಿಲಿಯನ್ ಮಂದಿ ಭಾರತೀಯರು ವಿವಿಧ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಪ್ರತಿ ೬ ಸೆಕೆಂಡ್‌ಗೆ ಹೇಗೆ ಮಗುವೊಂದು ಸಾವನ್ನಪ್ಪುತ್ತಿದೆಯೋ ಹಾಗೆ ಪ್ರತಿ ಮೂರು ನಿಮಿಷಕ್ಕೆ ಇರ್ವರು ಕ್ಷಯ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ದುರಂತವೆಂದರೆ ಭಾರತದಲ್ಲಿ ಸೃಷ್ಟಿಯಾಗಿರುವ ರೋಗಗಳಿಗೆ ಮದ್ದು ಸೃಷ್ಟಿಯಾಗುವುದು ಮಾತ್ರ ಬಲು ನಿಧಾನ. ಆದರೆ ಹಂದಿಜ್ವರದಂತಹ ಮಾರಕ ರೋಗಗಳು ಎರಗಿ ಬಂದರೂ ಅದಕ್ಕೆ ಮದ್ದುಗಳ ಸೃಷ್ಟಿ ಮಾತ್ರ ಬಲು ಬೇಗವಾಗುತ್ತದೆ.
ಪೌಷ್ಟಿಕಾಂಶತೆಯ ಬಗ್ಗೆ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಭಾರತ ಉತ್ತಮ ಸಾಮಾಜಿಕ ರಕ್ಷಣಾ ನಿಲುವನ್ನು ಹೊಂದಿದೆ ಯಾದರೂ ಕಾರ್ಯನಿರ್ವಹಣೆಯಲ್ಲಿ ಬಹಳ ಹಿನ್ನೆಡೆ ಹೊಂದಿದೆ. ಶಾಲಾ ವಿದ್ಯಾರ್ಥಿಗಳಿಗೆ ಉಚಿಟ ಬಿಸಿಯೂಟ, ಉದ್ಯೋಗ ಖಾತರಿ ಯೋಜನೆ, ಬಡವರಿಗಾಗಿ ಆಹಾರ ಸಾಮಾಗ್ರಿಗಳ ಬೆಲೆಯಲ್ಲಿ ಕಡಿತ ಮತ್ತು ಹಿರಿಯ ನಾಗರಿಕರಿಗೆ ವೃದ್ದಾಪ್ಯ ವೇತನ ಮುಂತಾದ ಸಾಮಾಜಿಕ ಕಾರ್ಯಕ್ರಮಗಳಿದ್ದರೂ ಸಮರ್ಪಕ ಕಾರ್ಯನಿರ್ವಹಣೆಯಲ್ಲಿ ಬಹಳ ಹಿಂದಿದೆ.ಇದರಿಂದ ದಿನದಿಂದ ದಿನಕ್ಕೆ ಸಾಮಾನ್ಯ ಜನತೆಯ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಈ ಬಗ್ಗೆ ಎನ್‌ಜಿ‌ಓದ ಆಹಾರ ಹಕ್ಕುಗಳ ವಿಭಾಗದ ಮುಖ್ಯಸ್ಥೆ ಜ್ಯೋತಿ ನಾಯಕ್ ಹೇಳುವುದು ಹೀಗೆ- ಯೋಜನೆಗಳು ಹಾಗೂ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಭಾರತದ ಪ್ರಯತ್ನ ತೀರಾ ಕಳಪೆಯಾಗಿದೆ. ಹಾಗೆಯೇ ಬಡವರಲ್ಲಿ ತಮ್ಮ ಹಕ್ಕುಗಳನ್ನು ಗುರುತಿಸುವಿಕೆಯ ಕೊರತೆಯಿರುವುದರಿಂದ ಯೋಜನೆಗಳನ್ನು ಜಾರಿಗೊಳಿಸುವುದು ಒಂದು ಸವಾಲಾಗಿ ಉಳಿದಿದೆ ಎನ್ನುತ್ತಾರೆ.
ಕೇಂದ್ರ ಸರಕಾರ ದೇಶದಲ್ಲಿರುವ ಹಸಿವಿನ ವಾಸ್ತವವನ್ನು ಒಪ್ಪಿಕೊಳ್ಳುವವರೆಗೂ ಈ ದೇಶದಲ್ಲಿ ಹಸಿವಿನ ತೀವ್ರತೆ ಹೆಚ್ಚಾಗುತ್ತಲೇ ಹೊಗುತ್ತದೆ.ಹಾಗೆಯೇ ಸಮಸ್ಯೆಯನ್ನು ಪರಿಹರಿಸುವ ಮೂಲಕ ದೇಶದ ಆರ್ಥಿಕ ಮುನ್ನಡೆಯ ಕಡೆಗೆ ಗಮನ ಹರಿಸಬೇಕಾಗಿದೆ. ಮಾತ್ರವಲ್ಲ, ದೇಶದಲ್ಲಿರುವ ಸಂಪೂನ್ಮೂಲಗಳ ಸಮರ್ಪಕ ಬಳಕೆ ಮಾಡುವತ್ತ ಹಾಗೂ ಬಡತನ ನಿರ್ಮೂಲನೆಗಾಗಿ ಯೋಜಿಸಿರುವ ಕಾರ್ಯಯೋಜನೆಗಳನ್ನು ಸಮರ್ಪಕ ನಿಟ್ಟಿನಲ್ಲಿ ಈಡೇರಿಸುವ ಪ್ರಯತ್ನವನ್ನಾದರೂ ಕೇಂದ್ರ ಸರಕಾರ ಮಾಡಬೇಕಾಗಿದೆ.
-ಶಂಶೀರ್, ಬುಡೋಳಿ

ವಿಮಾನ ಕಂಡುಹಿಡಿದದ್ದು ಆನೇಕಲ್ ಸುಬ್ಬರಾಯ ಶಾಸ್ತ್ರಿ

 ಆನೇಕಲ್ ಸುಬ್ಬರಾಯ ಶಾಸ್ತ್ರಿ
ಮಂಗಳೂರಿನಲ್ಲಿ ಶನಿವಾರ ನಡೆದ ಏರ್ ಇಂಡಿಯಾ ವಿಮಾನ ದುರಂತ ನಡುವೆ ವಿಮಾನಕ್ಕೆ ಸಂಬಂಧ ಪಟ್ಟಂತೆ ಕುತೂಹಲಕಾರಿ ಸಂಗತಿಯೊಂದು ಬೆಳಕು ಕಂಡಿದೆ. ವಿಮಾನ ಕಂಡುಹಿಡಿದವರು ಯಾರು? ಎಂದು ಕೇಳಿದರೆ ರೈಟ್ ಸಹೋದರರುಅಂತ ಸಣ್ಣ ಮಕ್ಕಳು ಸಹ ಉತ್ತರಿಸುತ್ತಾರೆ. ಇದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಆದರೆ ಸಣ್ಣ ಮಕ್ಕಳಿರಲಿ ದೊಡ್ಡವರೂ ಅರಗಿಸಿಕೊಳ್ಳಲಾಗದ ಸತ್ಯ ಏನೆಂದರೆ ವಿಮಾನ ಕಂಡುಹಿಡಿದದ್ದು ಕರ್ನಾಟಕದವರು ಎಂಬುದು.
       ಹೌದು ಇತಿಹಾಸದ ಪುಟಗಳಲ್ಲಿ ದಾಖಲಾಗದ ಮಹತ್ವದ ಸಂಗತಿಯೊಂದು ಅನಾವರಣಗೊಳ್ಳುತ್ತಿದೆ. ರೈಟ್ ಸಹೋದರರಿಗೂ ಮುನ್ನ ಬೆಂಗಳೂರು ಸಮೀಪದ ಆನೇಕಲ್ ನಲ್ಲಿದ್ದ ಸುಬ್ಬರಾಯ ಶಾಸ್ತ್ರಿಗಳು ವಿಮಾನ ತಯಾರಿಸಿ ಉಡಾಯಿಸಿದ್ದರು ಎಂಬುದೇ ಆ ಸತ್ಯ ಕಥೆ.    1940ರವರೆಗೂ ಸುಬ್ಬರಾಯ ಶಾಸ್ತ್ರಿಗಳು ಬದುಕಿದ್ದರು. ಭಾರದ್ವಾಜ ಮುನಿಗಳು ಸಂಸ್ಕೃತದಲ್ಲಿ ಬರೆದಿರುವ ವೈಮಾನಿಕ ಶಾಸ್ತ್ರ 'ಯಂತ್ರ ಸ್ವಾರಸ್ಯ'ಕ್ಕೆ ಶಾಸ್ತ್ರಿಗಳು ಭಾಷ್ಯ ಬರೆದಿದ್ದರು.
         1903ರಲ್ಲಿ ಮಾರುತ್ಸಕ ಎಂಬ ವಿಮಾನವನ್ನು ಸುಬ್ಬರಾಯ ಶಾಸ್ತ್ರಿಗಳು ಮುಂಬೈನಲ್ಲಿ ಉಡಾಯಿಸಿದ್ದರು. ಬ್ರಿಟೀಷರ ಕುತಂತ್ರದಿಂದ ಈ ಸಂಗತಿ ಇತಿಹಾಸದಲ್ಲಿ ದಾಖಲಾಗಲಿಲ್ಲ. ಜಗದೀಶ ಚಂದ್ರ ಬೋಸರು ಬರೆದಿರುವ ಸುಬ್ಬರಾಯ ಶಾಸ್ತ್ರಿಗಳ ಜೀವನ ಚರಿತ್ರೆಯಲ್ಲಿ ಈ ಬಗ್ಗೆ ಉಲ್ಲೇಖವಿದೆ.
ಹೆಚ್ಚಿನ ವಿವರಗಳಿಗೆ :-

ಮಂಗಳವಾರ, ಜುಲೈ 6, 2010

ಭೂಮಿಯ ಗಂಡಾಂತರಗಳ ಪಟ್ಟಿಗೆ ಹೊಸ ಸೇರ್ಪಡೆ.

ಭೂಮಿತಾಯಿ ಅನೇಕ ಗಂಡಾಂತರಗಳನ್ನು ಜಯಿಸಿದ ಮಹಾಮಾತೆ. ಇಂಥ ಗಟ್ಟಿಗಿತ್ತಿಗೆ 2012 ಡಿಸೆಂಬರ್‌ 21ರಂದು ಪ್ರಳಯದ ರೂಪದಲ್ಲಿ ಗಂಡಾತರ ಎರಗುತ್ತಿದೆ ಎಂಬ ವದಂತಿ ಸ್ವಲ್ಪ ಹಳೇದಾಯ್ತು. ಈಗಿರುವ ಘಮ ಘಮ ಸುದ್ದಿಯೇನೆಂದರೆ ಭೂಮಿಯು ಮತ್ತೊಂದು ಅನಾಹುತವನ್ನು ಎದುರಿಸಲು ಸಜ್ಜಾಗಬೇಕಾಗಿದೆ. ಈ ಅನಾಹುತವು ಸದ್ಯಕ್ಕಿನ್ನೂ ಕ್ಯೂನಲ್ಲಿದ್ದು, ತನ್ನ ಸರದಿ ಬರಲು ಸುಮಾರು 2013ರವರೆಗೆ ಕಾಯಬೇಕಿದೆ. ಈಗಿನ್ನೂ 2010 ತಾನೆ? ಇನ್ನು ಮೂರು ವರ್ಷ ಭಯವಿಲ್ಲ ಅಂದುಕೊಂಡರೂ..

ಕಾಲಕಾಲಕ್ಕೆ ಇಂತಹ ವಿವಿಧ ಊಹಾಪೋಹಗಳಿಗೆ ಬಣ್ಣ ಹಚ್ಚಿ, ರೆಕ್ಕೆಪುಕ್ಕ ಕಟ್ಟಿ ಬಿತ್ತರಿಸುತ್ತಾ ಬಂದಿರುವ ಸುದ್ದಿ ಮಾಧ್ಯಮಗಳು, ನಮ್ಮನ್ನು ಅಧೀರನ್ನಾಗಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿವೆ. ಇಂತಹ ವದಂತಿಗಳಲ್ಲಿ ಅದೆಷ್ಟು ವೈಜ್ಞಾನಿಕ ಸತ್ಯ ಅಡಗಿದೆ ಎಂಬುದನ್ನು ನಾಲ್ಕಾರು ದಿಕ್ಕಿನಲ್ಲಿ ವಿಶ್ಲೇಷಿಸಿದವರಿದ್ದಾರೆ. ಆದರೂ ಇಂತಹ ಊಹಾಪೋಹಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ.

"ಅಯ್ಯೋ ಬಂದಿದ್ದು ಬರ್ಲಿ ಬಿಡ್ಲೇ ನೋಡ್ಕೋಂಡ್ರಾಯ್ತು. ಆಕಸ್ಮಾತ್ ಹೋದ್ರೆ, ನಾನೊಬ್ನೆ ಅಲ್ಲ ಸುತ್ತಲೂ ಇರೊವ್ರು ಕೂಡ ಜೊತಿಗೆ ಬರ್ತಾರೆ" ಅನ್ನೋ ಒಂದು ಮೊಂಡ ಧೈರ್ಯವಂತೂ ನಮ್ಮಲ್ಲಿ ಈಗ ತಾನಾಗೇ ಬಂದು ಬಿಟ್ಟಿದೆ.

ಈ ಬಾರಿ ಇಂತಹ ಮತ್ತೊಂದು ಊಹಾಪೋಹಕ್ಕೆ ಕಾರಣವಾಗಿರುವುದು ಯಾರು? ಯಾವುದೋ ಕಾಲಜ್ಞಾನಿಯ ಪದ್ಯವೇ? ಅಥವ ಮತ್ತ್ಯಾವುದೋ ಕಾಲದ ಪಂಚಾಂಗವೇ? ಅಥವ ಇನ್ನೊಬ್ಬ ದಾರಿಹೋಕ ಜ್ಯೋತಿಷಿಯ ಕವಡೆ ಶಾಸ್ತ್ರವೇ?

ವಿಡಿಯೋ : ಸೌರ ಬಿರುಗಾಳಿಯ ವಿರಾಟ್ ರೂಪ ಮತ್ತು ಪರಿಣಾಮ

ಇಲ್ಲ ಇಲ್ಲ ಕ್ಷಮಿಸಿ! ಈ ಬಾರಿ ಇಂಥ ಅವಕಾಶವನ್ನು ಅಮೆರಿಕದ NASA ಸಂಸ್ಥೆಗೆ ನೀಡಲಾಗಿದೆ (ಅಥವ ಅವರೇ ಈ ಅವಕಾಶವನ್ನು ಕಸಿದು ಕೊಂಡಿದ್ದಾರೆ.) ಸೂರ್ಯನ ಕೇಂದ್ರದಲ್ಲಿ ಅಪಾರ ಪ್ರಮಾಣದ ಉಷ್ಣಶಕ್ತಿ ಇದ್ದು, ಸೂರ್ಯನು ಕೊತ ಕೊತ ಕುದಿಯುತ್ತಿರುವ ಬೆಂಕಿಯ ಉಂಡೆಯಂತೆ ಎನ್ನುವ ಜ್ಞಾನವನ್ನು ನಮ್ಮ ಪ್ರೈಮರಿ ತರಗತಿಗಳಿಂದಲೇ ಓದುತ್ತಾ ಬಂದಿದ್ದೇವೆ. ಈಗಾಗಲೇ ಭೂಮಿಯ ಮೇಲೆ ಶಕ್ತಿಯ ಮೂಲಗಳನ್ನೆಲ್ಲಾ ಉಂಡು ಮುಗಿಸಿರುವ ನಮಗೆ ಸೌರಶಕ್ತಿಯೇ ಭವಿಷ್ಯದ ಶಕ್ತಿ ಮೂಲವಾಗಿದ್ದು, ದಿನೇ ದಿನೇ ಸೌರ ಒಲೆ, ಸೌರ ದೀಪ, ಸೌರ ಸೈಕಲ್‌, ಎಂದು ನಾವೆಲ್ಲಾ ಸೂರ್ಯನನ್ನೇ ಬೆನ್ನತ್ತಿರುವುದು ಎಲ್ಲರಿಗೂ ತಿಳಿದೇಯಿದೆ.

ಈಗ ಇದೇ ಸೂರ್ಯನಲ್ಲಿ ಭಾರೀ ಪ್ರಮಾಣದ ಸೌರಗಾಳಿ ಬೀಸಲಿದ್ದು, ಸೌರಮಂಡಲದಲ್ಲಿ ಭಾರೀ ರೇಡಿಯೇಷನ್ ಸೃಷ್ಟಿಯಾಗುವ ನಿರೀಕ್ಷೆಯನ್ನು NASA ಹೊರಹಾಕಿದೆ. ಗಮನಿಸಿ, ನಾವು ಭಾರೀ ಯಶಸ್ಸು ಸಾಧಿಸಿರುವ ವೈರ್‌ಲೆಸ್ ತಂ‌ತ್ರಜ್ಞಾನದ ಬಂಡವಾಳವೇ ಇಂತಹ ರೇಡಿಯೋ ಅಲೆಗಳು. ಈ ತಂತ್ರಜ್ಞಾನವು ಕೃತಕ ಉಪಗ್ರಹ, ರೇಡಿಯೋ, ಟೀವೀ, ಏರ್‌ ಟ್ರಾವೆಲ್‌, ಜಿಪಿಎಸ್‌, ಬ್ಯಾಂಕಿಂಗ್, ಮೋಬೈಲ್ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸಖತ್ ಕ್ರಾಂತಿಗೆ ಕಾರಣವಾಗಿದೆ.

ಈಗ ಹೊರಬಿದ್ದಿರುವ ಮಾಹಿತಿಯಂತೆ ಸೂರ್ಯನಲ್ಲಿ ಇಂತಹ ಘಟನೆ ಸಂಭವಿಸಿದ್ದೇ ಆದರೆ, ಇದು ಭೂಮಿಗೆ ಭಾರೀ ಕಷ್ಟನಷ್ಟವನ್ನೇ ಉಂಟುಮಾಡಲಿದೆ ಎಂದು ಅಂದಾಜಿಸಲಾಗಿದೆ. ಆದರೆ ವಿದ್ಯುತ್ಕಾಂತೀಯ ಅಲೆಗಳಗೆ ಪ್ರತಿಸ್ಪಂದಿಸದಂತೆ ನಮ್ಮ ಉಪಗ್ರಹಗಳನ್ನು, ಟ್ರಾಸ್ಪಾರ್ಮಾರ್‌ಗಳನ್ನೂ ನಿಯಂತ್ರಿಸಬಹುದಾಗಿರುವುದರಿಂದ ಅನಾಹುತದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಸಾಧ್ಯತೆಗಳಿವೆ ಎಂದು ನಾಸಾ ತನ್ನ ವರದಿಯಲ್ಲಿ ಹೇಳುತ್ತದೆ. ಘಟನೆಯ ವೇಳೆ ಈ ಉಪಕರಣಗಳಿಗೆ ಸ್ವಲ್ಪ ನಿದ್ರೆ ಬರಿಸಿ ನಂತರ ಮತ್ತೆ ಎಚ್ಚರಿಸುವ ದಿಕ್ಕಿನಲ್ಲಿ ನಮ್ಮ ಉಳಿವು ಅಡಗಿದೆ ಎಂಬ ಮಾಹಿತಿಯನ್ನು ಜ್ಞಾನಿಗಳು ಹೊರಹಾಕಿದ್ದಾರೆ.

ಈಗಾಗಲೇ ಕಾರ್ಯಮಗ್ನವಾಗಿರುವ ಕೆಲವು ತಂತ್ರಜ್ಞರು, ಸೂರ್ಯನ ಮೇಲ್ಮೈಯಲ್ಲಿ ಸಂಭವಿಸುವ ಇಂತಹ ಆರ್ಭಟಗಳನ್ನು ನಿಖರವಾಗಿ ತಿಳಿದುಕೊಳ್ಳುವ ತಂತ್ರಜ್ಞಾನವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಅಭಿವೃದ್ದಿಪಡಿಸುವತ್ತಲೂ ಗಮನಹರಿಸಿದ್ದಾರೆ.

ಸೂರ್ಯನಲ್ಲಿ ಸಂಭವಿಸುವ ಅಧಿಕ ಉಷ್ಣತೆಯ ದುಷ್ಪರಿಣಾಮಗಳಿಂ‌ದ ರಕ್ಷಿಸಿಕೊಳ್ಳುವಲ್ಲಿ ಭೂಮಿಯು ಈಗಾಗಲೇ ಅನೇಕ ಬಾರಿ ಯಶಸ್ವಿಯಾಗಿದೆ. ಇದೀಗ ಜಗತ್ತಿನ ಅನೇಕ ರಾಷ್ಟ್ರಗಳು 2ಜಿ ಯಿಂದ 3ಜಿ ತಂತ್ರಜ್ಞಾನಕ್ಕೆ ಲಗ್ಗೆ ಇಟ್ಟಿವೆ/ಇಡುತ್ತಿವೆ. ಇದರಿಂದಲೂ ಸಾಕಷ್ಟು ರೇಡಿಯೇಷನ್ ಸೃಷ್ಟಿಯಾಗುತ್ತದಾದರೂ ಸದ್ಯಕ್ಕಿನ್ನೂ ಮಾನವನನ್ನು ನೇರವಾಗಿ ಬಲಿತೆಗೆದುಕೊಂಡ ವರದಿಗಳಿಲ್ಲ.

'ಕೇವಲ ಕಾಗೆ-ಗುಬ್ಬಿಗಳ' ಸಂತತಿಯನ್ನು ನುಂಗಾಕಿರುವ/ತ್ತಿರುವ ಈ ರೇಡಿಯೇಷನ್ ಸಾಲದಾಯಿತು ಎನ್ನಿಸುತ್ತದೆ. ಅದಕ್ಕೇ ಇರಬೇಕು ಈ ಬಾರಿ ಸೂರ್ಯನೇ ನಡೀ ಒಂದ್ ಕೈ ನೋಡೇ ಬಿಡೋಣಾ ಅಂತಾ ತೋಳೇರಿಸಿದ್ದಾನೆ ಅನ್ನಿಸುತ್ತಿದೆ. ಆದರೇ ಅದೆಗೋ ಈ ಮಾಹಿತಿಯನ್ನು ನಾಸಾದವರು ಪತ್ತೆ ಹಚ್ಚಿ ಬಿಟ್ಟಿದ್ದಾರೆ. ಆ ಮೂಲಕ ಸೂರ್ಯನ ಆಸೆಗೆ ತಣ್ಣೀರೆರಚುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಈಗ ನೀವೇ ಯಾರಾದ್ರೂ ಹೋಗಿ ಸೂರ್ಯದೇವನಿಗೆ ಹೇಳ್ಬೇಕಿದೆ. ನಾಸಾದರವರಿಗೆ ಅವನ ಸ್ಕೆಚ್‌ ಗೊತ್ತಾಗಿದೆ ಅಂತ. ಹೇಳ್ತೀರಾ? ಹೋಗ್ಲಿ ಒಂದು ಈಮೈಲ್‌ನಾದ್ರೂ ಕಳಿಸಿ. ಏನು?? ಐಡಿ ಗೊತ್ತಿಲ್ವ!!! ಓಕೇ ತಗೋಳ್ಳಿ "ಸೂರ್ಯದೇವ-ಮಿಶನ್-2013@ಸೌರಮಂಡಲ ಡಾಟ್ ಕಾಂ".

--- ದಟ್ಸ್ ಕನ್ನಡದಲ್ಲಿ

ಸೋಮವಾರ, ಜುಲೈ 5, 2010

ಮಳೆಗಾಲ!

ಅಬ್ಬಾ! ಈ ಕಾಲ ಆರಂಭ ವಾಯಿತೆಂದರೆ
ಮೈ ಮನಗಳ ಸುಳಿಯಲ್ಲಿ
ಹುದುಗಿರುವ ಶಾಶ್ವತ ನೆನಪುಗಳ ಜಲಧಾರೆ!

ಮಳೆ ಬರುವ ಚೆಂದವ ತೋರಿ
ಬಾಯಿಗೆ ಅನ್ನ ತುರುಕುತಿದ್ದ ಅಮ್ಮನ ತಾಳ್ಮೆ ನೆನಪಿದೆ
ಮುಂಗಾರು ಮಳೆಯಲಿ ನೆನೆದ ಹಸಿ ಕೆನ್ನೆಗೆ
ಬಿಸಿ ಮುತ್ತು ಕೊಟ್ಟ ನಲ್ಲೆಯ ಪ್ರೀತಿಯ ಜಾಣ್ಮೆ ನೆನಪಿದೆ
ತನ್ನ ಮೊಮ್ಮಗು ಎಲ್ಲಿ ನೆನೆವುದೋ ಎಂಬ ಆತಂಕದೊಂದಿಗೆ
ಅಜ್ಜಿ ಕೊಡೆ ಹಿಡಿದು ಶಾಲೆಗೆ ನುಗ್ಗಿದ ದಿನಗಳು ಎಷ್ಟಿಲ್ಲ!


ಮುಂಗಾರು ಮಳೆ ಜೊತೆ ಜೊತೆಗೇ ಪಟ ಪಟನೆ
ಬೀಳುತಿದ್ದ ಆಲಿಕಲ್ಲುಗಳ ನೆನಪಿದೆಯೇ?
ಆ ಕಲ್ಲುಗಳ ಆಯ್ದು ಕೊಂಡು ನುಂಗಿದ ನೆನಪು ಮಾಸಿಲ್ಲ ತಾನೇ?
ಅಡಿಯಿಂದ ಮು ಡಿ ವರೆಗೂ ಮಳೆಯಲ್ಲಿ ನೆನೆದ ತಪ್ಪಿಗೆ
ಶಿಕ್ಷೆಯಂತೆ ಬರುತಿದ್ದ ನೆಗಡಿಗಳಿಗೆ ಬರವಿತ್ತೇ?!



ಬಸವಳಿದ ಧರೆ ಬಿಸಿಲ ತಾಪ ತಾಳದೇ ಬಿರುಕು ಬಿಟ್ಟ ಕಾಲದಲ್ಲಿ
ಧೋ ಎಂದು ಸುರಿವ ಮಳೆಗೆ ಭೂತಾಯಿಯ ತಂಪು ಮಾಡುವ ಕೆಲಸವಾದರೆ
ಹುರುಪುಗೊಂಡ ಗಾಳಿಗೆ ಮಣ್ಣಿನ ವಾಸನೆ ಊರ ತುಂಬಾ ಪಸರಿಸುವ ಕೆಲಸ
ಆಗಾಗ ಕಾರ್ಮೋಡ ಗಳ ಮಧ್ಯೆ ಬಿಸಿಲ ಸಂಚಾರ
ಫಲವಾಗಿ ಮೂಡುತಿತ್ತು ಕಾಮನಬಿಲ್ಲಿನ ಚಿತ್ತಾರ!


ಮಳೆ ಬಿದ್ದ ಮಾರನೆಯ ಬೆಳಿಗ್ಗೆಯ ಅನುಭವವೇ ಬೇರೆ
ಮನೆಯಂಗಳದ ಗುಲಾಬಿ ಗಿಡದ ಮೇಲೆ
ರಾಶಿ ರಾಶಿ ಇಬ್ಬನಿ ಹನಿಗಳ ಮಾಲೆ
ಜೋಕಾಲಿ ಹಾಡುತ ಆಗಲೋ ಈಗಲೋ ಉದುರಿಬಿಡುವ
ಇಬ್ಬನಿ ಹನಿಗಳ ಸೊಗಸೇ ಸೊಗಸು
ಕೆಂಪು ಗುಲಾಬಿಯಮೇಲೆ ಕೆಂಪು
ಹನಿಯಂತಾಗುವ ಭಾಗ್ಯ ಇಬ್ಬನಿಯದು
ಅಲ್ಪ ಕಾಲವಾದರೂ ತನ್ನ ಸೌಂದರ್ಯವ ಹೆಚ್ಚಿಸಿದ
ಮಳೆರಾಯನಿಗೆ ಗುಲಾಬಿ ವಂದನೆ ಹೇಳಿದಂತೆ ತಲೆ ಬಾಗಿಹುದು

ಇಂಥ ಅನೇಕ ಪವಾಡ ಮಾಡುವ ಮಳೆಗಾಲದು ಎಂಥ ಮರ್ಮ?
ಅದಕ್ಕೆ ಉಳಿದೆಲ್ಲ ಕಾಲಕ್ಕಿಂತ ಈ ಕಾಲ ಚೆನ್ನ ಎನಿಸುವುದು ಅತಿಶಯೋಕ್ತಿ ಅಲ್ಲ
ಕಾಲ ಉರುಳಿ ಕಾಲ ಮರಳಿ ಬರುವುದು ಪ್ರಕೃತಿ ಧರ್ಮ
ಮಳೆ ಬಂದು ಹೋಗುವ ಈ ಪರಿಯ ಕಂಡು ಮನಸು ಹೂವಂತಾಗಿರುವುದು ಸುಳ್ಳಲ್ಲ!
ಬಿ.ಅಬ್ದುಲ್ ಮಜೀದ್ (ಬಾಳಾಯ)ತಿಂಗಳಾಡಿ