ಬುಧವಾರ, ಜುಲೈ 28, 2010

‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ವಂಶಜರು ಹೇಗಿದ್ದಾರೆ?

 ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್
ಬ್ರಿಟೀಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದ ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ವಂಶಜರು ಕೊಲ್ಕತ್ತಾಕ್ಕೆ ದಬ್ಬಲ್ಪಟ್ಟ ನಂತರ ಅವರ ಸ್ಥಿತಿ-ಗತಿ ಹೇಗಿದೆ? ಅವರು ಹೇಗೆ ಬಾಳುತ್ತಿದ್ದಾರೆ ಎಂಬುದರ ಕುರಿತು ಗಮನ ಹರಿಸಿದವರ ಪಟ್ಟಿ ಅಷ್ಟರಲ್ಲೇ ಇದೆ. ಈ ವಿಚಾರದಲ್ಲಿ ಆತನ ಕರ್ಮಭೂಮಿ ಕರ್ನಾಟಕವೂ ಹೊರತಲ್ಲ.
ಕನ್ನಡಕ ಧರಿಸಿರುವ 70 ಹರೆಯದ ನರೆತ ಕೂದಲಿನ ಹುಸೇನ್ ಶಾ ಅವರನ್ನೇ ಪರಿಗಣಿಸಿದರೂ, ಅವರು ಅಂತರಂಗದಲ್ಲಿ ಬಂಗಾಳಿ. ಆದರೆ ಅವರ ಮನಸ್ಸಿನಾಳದಲ್ಲಿ ತಾನು ಆಜನ್ಮ ಹೋರಾಟಗಾರ ಟಿಪ್ಪು ಸುಲ್ತಾನ್‌ನ ವಂಶಜ ಎನ್ನುವ ಕಸುವು ಮಾಸಿಲ್ಲ.
ನಾವು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಕೊಲ್ಕತ್ತಾದಲ್ಲೇ, ಇದು ಕಳೆದ ಹಲವು ಪೀಳಿಗೆಗಳಿಂದಲೇ ಹೀಗೆ ನಡೆಯುತ್ತಾ ಬಂದಿದೆ. ಹಾಗಾಗಿ ನಾನು ಸೇರಿದಂತೆ ನಮ್ಮ ಜತೆಗಿದ್ದವರೆಲ್ಲ ಶುದ್ಧ ಬೆಂಗಾಲಿಗಳಾಗಿ ಮಾರ್ಪಟ್ಟಿದ್ದೇವೆ ಎನ್ನುತ್ತಾರೆ.
ಈ ಹುಸೇನ್ ಅವರ ಮುತ್ತಜ್ಜ ಅನ್ವರ್ ಶಾ ಅವರ ತಾತ ಟಿಪ್ಪು ಸುಲ್ತಾನ್. ಅಂದರೆ ಹುಸೇನ್ ಮತ್ತು ಟಿಪ್ಪು ನಡುವೆ ಐದಕ್ಕೂ ಹೆಚ್ಚು ತಲೆಮಾರುಗಳು ಸಂದು ಹೋಗಿವೆ. ಸಹಜವಾಗಿ ಬದಲಾವಣೆ ಎನ್ನುವುದು ಅವರ ರಕ್ತದಲ್ಲೇ ಇದೀಗ ಹುದುಗಿ ಹೋಗಿದೆ.
ಮೈಸೂರು ಸಂಸ್ಥಾನದ ರಾಜನಾಗಿದ್ದ ಟಿಪ್ಪು ಸುಲ್ತಾನ್‌ನನ್ನು ಶ್ರೀರಂಗಪಟ್ಟಣದಲ್ಲಿ ಬ್ರಿಟೀಷ್ ಪಡೆಗಳು ನಾಲ್ಕನೇ ಮೈಸೂರು ಯುದ್ಧದಲ್ಲಿ 1799ರ ಮೇ 4ರಂದು ಕೊಂದು ಹಾಕಿದ ನಂತರ ಆತನ ಕುಟುಂಬಿಕರನ್ನು ಕೊಲ್ಕತ್ತಾಕ್ಕೆ ಕಳುಹಿಸಲಾಗಿತ್ತು.
ನಗರಕ್ಕೆ ಟಿಪ್ಪು ಕುಟುಂಬವು ಹೇಗೆ ಬಂತು ಎಂಬುದನ್ನು ಹುಸೇನ್ ಶಾ ವಿವರಿಸುವುದು ಹೀಗೆ.
ಮೈಸೂರಿನಲ್ಲಿ ಟಿಪ್ಪುವನ್ನು ಬ್ರಿಟೀಷರು ಕೊಂದ ನಂತರ, ಆತನ 12 ಮಕ್ಕಳು ಮತ್ತು ಸಂಬಂಧಿಕರು ಸೇರಿದಂತೆ 300 ಮಂದಿಯನ್ನು ಕೊಲ್ಕತ್ತಾಕ್ಕೆ ಸ್ಥಳಾಂತರಿಸಲಾಯಿತು. ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಟಿಪ್ಪು ಕುಟುಂಬವು ಜನರನ್ನು ಪ್ರಚೋದಿಸಿ ಚಳವಳಿಗಳನ್ನು ನಡೆಸಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿತ್ತು’
ಮೈಸೂರಿನಿಂದ ಕೊಲ್ಕತ್ತಾಕ್ಕೆ ಸ್ಥಳಾಂತರಗೊಂಡ ಟಿಪ್ಪು ಕುಟುಂಬಿಕರಿಗೆ ಸರಕಾರದಿಂದ ಪಿಂಚಣಿ ಮತ್ತು ಜಮೀನುಗಳನ್ನು ಕೂಡ ನೀಡಲಾಗಿತ್ತು. ಪ್ರಸಕ್ತ ಅವರು ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೂ ಸರಕಾರಗಳು ಅವರನ್ನು ಮೂಲೆಗುಂಪು ಮಾಡುತ್ತಿವೆ ಎಂಬ ನೋವು ವಂಶಜರದ್ದು.
ಐತಿಹಾಸಿಕ ತಜ್ಞರೊಬ್ಬರ ಪ್ರಕಾರ ಟಿಪ್ಪುವಿನ ತಂದೆ ಹೈದರಾಲಿ ಮೂಲತಃ ಉತ್ತರ ಭಾರತದ ಕುಟುಂಬಕ್ಕೆ ಸೇರಿದವನು. ಅಲ್ಲಿಂದ ಕರ್ನಾಟಕಕ್ಕೆ ಆತನ ಕುಟುಂಬ ವಲಸೆ ಬಂದಿತ್ತು.
ಕಳೆದ ವರ್ಷವಷ್ಟೇ ಇದೇ ಕುಟುಂಬಕ್ಕೆ ಸೇರಿದ 20ರ ಹರೆಯದ ಎಸ್.ಎಂ. ಇಸ್ಮಾಯಿಲ್ ಎಂಬ ಬಿಕಾಂ ವಿದ್ಯಾರ್ಥಿ ಕರ್ನಾಟಕಕ್ಕೆ ಭೇಟಿ ನೀಡಿ, ತನ್ನ ಪೂರ್ವಜ ಟಿಪ್ಪು ಸುಲ್ತಾನ್ ಗರಿಮೆಗಳನ್ನು ಕನ್ನಡಿಗರಿಂದ ಕೇಳಿ ತಿಳಿದು ಕಣ್ತುಂಬಿಕೊಂಡಿದ್ದ.
ಕಾನೂನು ಪದವಿ ಓದಿ ಕಾನೂನು ಪಂಡಿತನಾಗುವ ಆಸೆ ಹೊತ್ತಿರುವ ಇಸ್ಮಾಯಿಲ್‌ಗೆ ಕರ್ನಾಟಕವೆಂದರೆ ಅದೇನೋ ಮೋಹ. ಮನೆ ಮಂದಿಯನ್ನೆಲ್ಲ ತನ್ನ ಪೂರ್ವಜನಾಳಿದ ನೆಲಕ್ಕೆ ಕರೆ ತಂದು ಅಳಿದುಳಿದ ಮೈಲಿಗಲ್ಲುಗಳನ್ನು ತೋರಿಸಬೇಕೆಂಬುದು ಆತನ ಆಸೆ. ಈ ಸಂಬಂಧ ರಾಜ್ಯ ಸರಕಾರವನ್ನೂ ಮನವಿ ಮಾಡಿದ್ದ.
ಆದರೂ ದೇಶಕ್ಕಾಗಿ ಹೋರಾಡಿದ ಇತಿಹಾಸ ಹೊಂದಿರುವ ಈ ಕುಟುಂಬದ ಬಗ್ಗೆ ಇದುವರೆಗೆ ಯಾವುದೇ ಸರಕಾರಗಳೂ ಗಮನ ಹರಿಸಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ